ನವದೆಹಲಿ: ಗಡಿ ನಿಯಂತ್ರಣ ರೇಖೆಯಲ್ಲಿ ಭಯೋತ್ಪಾದನಾ ನಿಗ್ರಹ ಗಸ್ತು ಸಂದರ್ಭದಲ್ಲಿ ಮೃತಪಟ್ಟ ಯೋಧರೊಬ್ಬರ ಪತ್ನಿಗೆ ಪಿಂಚಣಿ (ಎಲ್ಎಫ್ಪಿ)ಮತ್ತು ಇತರೆ ಸೌಲಭ್ಯಗಳನ್ನು ನೀಡುವ ಸಶಸ್ತ್ರ ಪಡೆಗಳ ನ್ಯಾಯಮಂಡಳಿ ನೀಡಿದ್ದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ₹50 ಸಾವಿರ ದಂಡ ವಿಧಿಸಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರು ಇರುವ ವಿಭಾಗೀಯ ಪೀಠವು, .ಸೈನಿಕನ ವಿಧವೆಯನ್ನು ನ್ಯಾಯಾಲಯಕ್ಕೆ ಎಳೆದು ತರಬಾರದಿತ್ತು.ನಿರ್ಧಾರ ಕೈಗೊಳ್ಳುವ ಅಧಿಕಾರಿಗಳು ಕರ್ತವ್ಯದ ವೇಳೆ ಮೃತಪಟ್ಟ ಯೋಧನ ಪತ್ನಿಯ ವಿಚಾರದಲ್ಲಿ ಸಹಾನುಭೂತಿ ಹೊಂದಿರಬೇಕಿತ್ತು. ಈ ತಪ್ಪಿಗಾಗಿ ₹50 ಸಾವಿರ ದಂಡ ವಿಧಿಸುತ್ತಿದ್ದೇವೆ. ಈ ಮೊತ್ತವನ್ನು ಯೋಧನ ಪತ್ನಿಗೆ ನೀಡಬೇಕು’ ಎಂದು ಪೀಠವು ನಿರ್ದೇಶಿಸಿದೆ.
ಯೋಧ ನಾಯ್ಕ ಇಂದರ್ಜೀತ್ ಸಿಂಗ್ ಅವರು 2013ರ ಜನವರಿಯಲ್ಲಿ ಗಸ್ತು ನಡೆಸುತ್ತಿದ್ದಾಗ ತೀರಾ ವಿಷಮ ಹವಾಮಾನ ಪರಿಸ್ಥಿತಿಯಲ್ಲಿ ಹೃದಯ ಸ್ತಂಭನದಿಂದಾಗಿ ಮೃತಪಟ್ಟಿದ್ದರು.