ಬೆಂಗಳೂರು: ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಲ್ಪಿಸದ ಆರೋಪವಿದ್ದಾಗ ಸ್ಥಳೀಯ ಶಾಸಕರು ಸಲಹೆ-ಶಿಫಾರಸು ಮೇರೆಗೆ ಸರ್ಕಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು ತಪ್ಪಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅಧಿಕಾರಿಯ ಅರ್ಜಿಯನ್ನು ತಿರಸ್ಕರಿಸಿದೆ.
ಬಂಗಾರಪೇಟೆಯಲ್ಲಿ ತಹಸೀಲ್ದಾರ್ ಗ್ರೇಡ್ -1 ಆಗಿ ಸೇವೆ ಸಲ್ಲಿಸುತ್ತಿದ್ದ ತಮ್ಮನ್ನು ಅವಧಿಪೂರ್ವವಾಗಿ ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಗೆ ವರ್ಗಾವಣೆ ಮಾಡಿದ್ದ ಸರ್ಕಾರದ ಕ್ರಮ ಪುರಸ್ಕರಿಸಿದ ಕೆಎಟಿ ಆದೇಶ ಪ್ರಶ್ನಿಸಿ ಎಸ್. ವೆಂಕಟೇಶಪ್ಪ ಎಂಬುವವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರ ನೇತೃತ್ವದ ವಿಭಾಗೀಯ ಪೀಠ, ಅರ್ಜಿದಾರರ ವಿರುದ್ಧ ಕಚೇರಿಗೆ ಸಮಯಕ್ಕೆ ಬಾರದ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸದ ಆರೋಪವಿತ್ತು. ಈ ಕುರಿತು ಬಂಗಾರಪೇಟೆ ಕ್ಷೇತ್ರದ ಶಾಸಕರಿಗೆ ಸಾರ್ವಜನಿಕರೇ ದೂರು ನೀಡಿದ್ದರು. ಆ ದೂರು ಆಧರಿಸಿ ಶಾಸಕರು ಕಂದಾಯ ಸಚಿವರಿಗೆ ಪತ್ರ ಬರೆದು, ಅರ್ಜಿದಾರರ ವರ್ಗಾವಣೆಗೆ ಕೋರಿದ್ದರು. ಬಳಿಕ ಸರ್ಕಾರ ಅರ್ಜಿದಾರರನ್ನು ವರ್ಗಾಯಿಸಿದೆ. ಈ ಎಲ್ಲಾ ಅಂಶ ಪರಿಗಣಿಸಿ ಕೆಎಟಿಯು ಅರ್ಜಿದಾರರ ಅವಧಿಪೂರ್ವ ವರ್ಗಾವಣೆ ಪುರಸ್ಕರಿಸಿರುವುದರಲ್ಲಿ ಯಾವುದೇ ದೋಷಗಳು ಕಂಡು ಬರುತ್ತಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.