ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಜನರಿಗೆ ದುಬಾರಿ ವೆಚ್ಚದ 17 ಕಾಯಿಲೆಗಳ ಚಿಕಿತ್ಸಾ ವೆಚ್ಚವನ್ನು ‘ಕಾರ್ಪಸ್ ಫಂಡ್’ ಸ್ಥಾಪಿಸಿ ಭರಿಸುವ ಯೋಜನೆ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನಲ್ಲಿ ಪರಿಶಿಷ್ಟರ ಕಲ್ಯಾಣ ಯೋಜನೆ (ಎಸ್ಸಿಎಸ್ಪಿ, ಟಿಎಸ್ಪಿ) ಅಡಿಯಲ್ಲಿ ಪ್ರಸ್ತುತ ಲಭ್ಯ ಇರುವ ₹ 47 ಕೋಟಿ ಮೊತ್ತದಲ್ಲಿ ಕಾರ್ಪಸ್ ಫಂಡ್ ಸ್ಥಾಪಿಸಿ ಅದರ ಬಡ್ಡಿಯ ಮೊತ್ತದಿಂದ ಈ ಕಾಯಿಲೆಗಳ ಚಿಕಿತ್ಸಾ ವೆಚ್ಚ ಭರಿಸಲು ಸರ್ಕಾರ ನಿರ್ಧರಿಸಿದೆ.
ಈಗಾಗಲೇ ದುಬಾರಿ ವೆಚ್ಚದ ಒಟ್ಟು 33 ಕಾಯಿಲೆಗಳಲ್ಲಿ 16 ಕಾಯಿಲೆಗಳಿಗೆ ರಾಜ್ಯ ಸರ್ಕಾರದ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ, ಜೀವ ಸಾರ್ಥಕತೆ ಮುಂತಾದ ಯೋಜನೆಗಳಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಉಳಿದ 17 ಕಾಯಿಲೆಗಳ ಚಿಕಿತ್ಸಾ ವಿಧಾನಗಳ ವೆಚ್ಚವನ್ನು ಬಡ್ಡಿ ಮೊತ್ತದಲ್ಲಿ ಭರಿಸಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.