ಶಾಲಾ ಪ್ರವೇಶಾತಿಗೆ ಹಿಂದೆ ಓದಿದ ಶಿಕ್ಷಣ ಸಂಸ್ಥೆಗಳಿಂದ ವರ್ಗಾವಣೆ ಪ್ರಮಾಣಪತ್ರ(Transfer certificate) ತರುವಂತೆ ಒತ್ತಾಯಿಸಬಾರದು ಈ ಸಂಬಂಧ ರಾಜ್ಯದ ಎಲ್ಲಾ ಶಾಲಾ ಆಡಳಿತ ಮಂಡಳಿಗೆ ಸುತ್ತೋಲೆ ಹೊರಡಿಸುವಂತೆ ಮದ್ರಾಸ್ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಶಾಲೆಗಳು ವಿದ್ಯಾರ್ಥಿಯ ವರ್ಗಾವಣೆ ಪ್ರಮಾಣಪತ್ರವನ್ನು (ಟಿಸಿ) ಶುಲ್ಕದ ಬಾಕಿ ವಸೂಲಿ ಮಾಡುವ ಸಾಧನವಾಗಿಯೂ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿರುವ ಮದ್ರಾಸ್ ಹೈಕೋರ್ಟ್ ,ವಿದ್ಯಾರ್ಥಿಗಳು ಹಣ ಪಾವತಿಸಿಲ್ಲ ಅಥವಾ ಹಣ ಪಾವತಿ ವಿಳಂಬವಾಗಿದೆ ಎಂಬಂತಹ ಅನಗತ್ಯ ವಿವರಗಳನ್ನು ಟಿಸಿಗಳಲ್ಲಿ ನಮೂದಿಸುವುದನ್ನು ಶಾಲೆಗಳು ನಿಷೇಧಿಸಬೇಕು ಎಂದು ನ್ಯಾಯಮೂರ್ತಿಗಳಾದ ಎಸ್ ಎಂ ಸುಬ್ರಮಣ್ಯಂ ಮತ್ತು ಸಿ ಕುಮಾರಪ್ಪನ್ ಅವರಿದ್ದ ಪೀಠ ಹೇಳಿದೆ.
ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲು ಮತ್ತು ನಿಯಮಗಳು ಶಿಕ್ಷಣದ ಹಕ್ಕು (ಆರ್ಟಿಇ) ಕಾಯಿದೆಗೆ ಅನುಗುಣವಾಗಿವೆ ಎಂದು ಖಚಿತಪಡಿಸಿಕೊಳ್ಳಲು ತಮಿಳುನಾಡು ಶಿಕ್ಷಣ ನಿಯಮಾವಳಿ ಮತ್ತು ಮೆಟ್ರಿಕ್ಯುಲೇಷನ್ ಶಾಲೆಗಳ ನಿಯಂತ್ರಣ ಸಂಹಿತೆಗೆ ತಿದ್ದುಪಡಿ ಮಾಡುವುದನ್ನು ತಮಿಳುನಾಡು ಸರ್ಕಾರ ಪರಿಗಣಿಸಬೇಕು ಎಂದು ಅದು ಹೇಳಿದೆ.
ಎಲ್ಲಾ ಶುಲ್ಕ ಪಾವತಿಸುವವರೆಗೆ ವಿದ್ಯಾರ್ಥಿಗೆ ಟಿಸಿ ನೀಡದಿರುವುದು ಇಲ್ಲವೇ ಟಿಸಿಯಲ್ಲಿ ಶುಲ್ಕ ಪಾವತಿಸಬೇಕಾದ ವಿಚಾರವನ್ನು ಉಲ್ಲೇಖಿಸುವುದು ಆರ್ಟಿಇ ಕಾಯಿದೆಯ ಉಲ್ಲಂಘನೆಯಾಗಿದ್ದು ಆರ್ಟಿಇ ಕಾಯ್ದೆಯ ಸೆಕ್ಷನ್ 17 ರ ಅಡಿಯಲ್ಲಿ ಮಾನಸಿಕ ಕಿರುಕುಳವಾಗುತ್ತದೆ ಎಂದು ಪೀಠ ಹೇಳಿದೆ.
ಪಾಲಕರಿಂದ ಬಾಕಿ ಶುಲ್ಕ ಸಂಗ್ರಹಿಸುವ ಅಥವಾ ಪೋಷಕರ ಆರ್ಥಿಕ ಸಾಮರ್ಥ್ಯ ಅಳೆಯುವ ಸಾಧನ ಟಿಸಿ ಅಲ್ಲ. ಅದು ಮಗುವಿನ ಹೆಸರಿನಲ್ಲಿ ನೀಡುವ ವೈಯಕ್ತಿಕ ದಾಖಲೆಯಾಗಿದೆ. ಟಿಸಿಯಲ್ಲಿ ಅನಗತ್ಯ ವಿವರ ಸೇರಿಸುವ ಮೂಲಕ ಶಾಲೆಗಳು ತಮ್ಮ ಸ್ವಂತದ ಸಮಸ್ಯೆಗಳನ್ನು ಮಗುವಿನ ಮೇಲೆ ಹಾಕುವಂತಿಲ್ಲ.
ಈ ರೀತಿ ಮಗುವಿನ ಮೇಲೆ ಒತ್ತಡ ಹಾಕುವುದು ಆರ್ಟಿಇ ಕಾಯಿದೆಯ ಸೆಕ್ಷನ್ 17 ರ ಅಡಿಯಲ್ಲಿ ಒಂದು ರೀತಿಯಲ್ಲಿ ಮಾನಸಿಕ ಕಿರುಕುಳವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.