ಸುದ್ದಿ

₹1ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಇನ್‌ಸ್ಪೆಕ್ಟರ್ ಮತ್ತು ಸಬ್ ಇನ್‌ಸ್ಪೆಕ್ಟರ್

Share It

ಪ್ರಕರಣ ಕೈಬಿಡಲು ₹6 ಲಕ್ಷ ರು.ಲಂಚಕ್ಕೆ ಬೇಡಿಕೆ ಆರೋಪ. ದೂರುದಾರರಿಂದ ₹1 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಂದ ಬಂಧನ

ಬೆಂಗಳೂರು: ಪ್ರಕರಣವೊಂದರ ಇತ್ಯರ್ಥಕ್ಕಾಗಿ ₹1 ಲಕ್ಷ ರು.ಲಂಚ ಪಡೆಯುತ್ತಿದ್ದಾಗ ಕೆಂಪೇಗೌಡ ನಗರ ಪೊಲೀಸ ಠಾಣೆ ಇನ್‌ಸ್ಪೆಕ್ಟರ್ ಮತ್ತು ಸಬ್ ಇನ್‌ಸ್ಪೆಕ್ಟರ್ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಇನ್‌ಸ್ಪೆಕ್ಟರ್ ಶಿವಾಜಿರಾವ್ ಮತ್ತು ಸಬ್ ಇನ್‌ಸ್ಪೆಕ್ಟರ್ ಶಿವಾನಂದ್ ಬಂಧಿತರು.

ಆವಲಹಳ್ಳಿ ನಿವಾಸಿ ಕೇಶವ ಮೂರ್ತಿ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಅವರ ಹೆಸರನ್ನು ಕೈಬಿಡಲು ₹6 ಲಕ್ಷ ರು. ಲಂಚ ನೀಡುವಂತೆ ಆರೋಪಿಗಳು ಬೇಡಿಕೆ ಇಟ್ಟಿದ್ದರು. ಈ ಸಂಬಂಧ ದೂರುದಾರ ಕೇಶವ ಮೂರ್ತಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಪೊಲೀಸರು ದೂರುದಾರರಿಂದ ₹1 ಲಕ್ಷ ರು. ಲಂಚ ಪಡೆಯುತ್ತಿದ್ದ ವೇಳೆ ಬಂಧಿಸಿದ್ದಾರೆ.

ಏನಿದು ಪ್ರಕರಣ: 2018 ರಲ್ಲಿ ಚಿನ್ನಾಭರಣ ವ್ಯಾಪಾರಿ ಉತ್ತಮ್‌ಚಂದ್ ಎಂಬುವರ ಬಳಿ ಕೇಶವಮೂರ್ತಿ ಚಿನ್ನಾಭರಣ ಖರೀದಿಸುವ ಮೂಲಕ ಪರಿಚಿತನಾಗಿದ್ದ. ಬಳಿಕ ಅಬಕಾರಿ ಇಲಾಖೆಯಲ್ಲಿ ತಾನು ಕಾರು ಚಾಲಕ ಎಂದು ಹೇಳಿಕೊಡಿದ್ದ ಕೇಶವಮೂರ್ತಿ ಬಾರ್ ಪರವಾನಗಿ ಕೊಡಿಸುವುದಾಗಿ ನಂಬಿಸಿ ಉತ್ತಮ್‌ಚಂದ್‌ರಿಂದ ₹1.3 ಕೋಟಿ ಪಡೆದು ಕೊಂಡಿದ್ದ. ಅಲ್ಲದೇ, 1.24 ಕೆಜಿ ಚಿನ್ನಾಭರಣ ಸಹ ಪಡೆ ದುಕೊಂಡಿದ್ದ. ಆದರೆ ಯಾವುದೇ ಕೆಲಸ ಮಾಡಿಕೊಡದೆ, ಇತ್ತ ಕೊಟ್ಟ ಹಣವನ್ನು ಹಿಂದಿರುಗಿಸದ ಕಾರಣ ಕೇಶವ ಮೂರ್ತಿ ವಿರುದ್ಧ ಚಿನ್ನದ ವ್ಯಾಪಾರಿ ಉತ್ತಮ್ ಚಂದ್ ದೂರು ನೀಡಿದ್ದರು.

ಈ ಪ್ರಕರಣದಲ್ಲಿ ಕೇಶವಮೂರ್ತಿ ಹೆಸರು ಕೈ ಬಿಟ್ಟು ಬಿ ರಿಪೋರ್ಟ್ ಸಲ್ಲಿಸಲು ಕೆಂಪೇಗೌಡ ನಗರ ಠಾಣೆಯ ಇಬ್ಬರು ಇನ್‌ಸ್ಪೆಕ್ಟರ್ ಗಳು ₹6 ಲಕ್ಷ ರು.ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು ₹1 ಲಕ್ಷ ರು.ಲಂಚದ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.


Share It

You cannot copy content of this page