ಚಿತ್ರದುರ್ಗ: ಡಿಡಿಪಿಐ ಕಚೇರಿಯಲ್ಲೇ ಮದ್ಯ ಕುಡಿದ ಆರೋಪದ ಮೇಲೆ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಿ ಬುಧವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಆದೇಶ ಮಾಡಿದ್ದಾರೆ.
ಕಚೇರಿಯ ಅಧೀಕ್ಷಕ ಸುನೀಲ್ ಕುಮಾರ್, ಪ್ರಥಮ ದರ್ಜೆ ಸಹಾಯಕ ಸ್ವಾಮಿ, ಡಿ. ದರ್ಜೆ ನೌಕರ ತಿಪ್ಪೇಸ್ವಾಮಿ, ವಾಹನ ಚಾಲಕ ರವಿ ಅಮಾನತುಗೊಂಡ ಸಿಬ್ಬಂದಿಗಳು.ಕಚೇರಿಯಲ್ಲಿ ಮದ್ಯ ಸೇವನೆ ಮಾಡಿದ ವಿಡಿಯೊವೊಂದು ಜಾಲತಾಣಗಳಲ್ಲಿ ಹರಿದಾಡಿತ್ತು. ಇದನ್ನು ಗಮನಿಸಿದ ಡಿಡಿಪಿಐ ಎಂ.ಆರ್. ಮಂಜುನಾಥ್ ಸಿಬ್ಬಂದಿಯ ಅಮಾನತಿಗೆ ಶಿಫಾರಸು ಮಾಡಿದ್ದರು.
ಕಚೇರಿಯಲ್ಲಿ 20 ಲೀಟರ್ ನೀರಿನ ಕ್ಯಾನ್ಗೆ ಬಾಟಲಿಗಳಿಂದ ಮದ್ಯ ಸುರಿಯುವ, ಅದಕ್ಕೆ ನೀರು ತುಂಬಿಸುವ, ಕೆಲವರು ಅಲ್ಲೇ ಸೇವಿಸುವ, ನಂತರ ಕಾರ್ನಲ್ಲಿ ಬೇರೆ ಸ್ಥಳಕ್ಕೆ ತೆರಳುವ ದೃಶ್ಯಗಳು ವಿಡಿಯೊದಲ್ಲಿದ್ದು, ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.
‘ಅ. 7ರಂದು ವಾಲ್ಮೀಕಿ ಜಯಂತಿಯ ದಿನ ಪಾರ್ಟಿ ಮಾಡಲಾಗಿದೆ ಎನ್ನಲಾಗಿದೆ. ಈ ವಿಷಯ ಗಮನಕ್ಕೆ ಬಂದ ಕೂಡಲೇ ನಾಲ್ವರ ಅಮಾನತಿಗೆ ಶಿಫಾರಸು ಮಾಡಿದ್ದೇನೆ ಎಂದು ಡಿಡಿಪಿಐ ಎ.ಆರ್.ಮಂಜುನಾಥ್ ಹೇಳಿದ್ದಾರೆ.