ಸುದ್ದಿ

ಉದ್ಯೋಗಿ ಆತ್ಮಹತ್ಯೆ; ಓಲಾ ಮಾಲೀಕರಿಗೆ ಪೊಲೀಸರು ಕಿರುಕುಳ ನೀಡದಂತೆ ಹೈಕೋರ್ಟ್ ನಿರ್ದೇಶನ

Share It

ಬೆಂಗಳೂರು: ಉದ್ಯೋಗಿಯೊಬ್ಬರ ಆತ್ಮಹತ್ಯೆ ಪ್ರಕರಣ ಸಂಬಂಧ ಕಿರುಕುಳ ನೀಡಿದ ಆರೋಪದ ಮೇಲೆ ಓಲಾ ಎಲೆಕ್ಟಿಕ್ ಕಂಪನಿಯ ಮಾಲೀಕ ಭವೀಶ್ ಅಗರ್ವಾಲ್ ಸೇರಿ ಮೂವರ ವಿರುದ್ಧ ದಾಖಲಾಗಿರುವ ಎಫ್‌ಐಆ‌ರ್ ಸಂಬಂಧ ಅವರಿಗೆ ಕಿರುಕುಳ ನೀಡಬಾರದು ಎಂದು ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆ‌ರ್ ರದ್ದುಪಡಿಸುವಂತೆ ಕೋರಿ ಓಲಾ ಎಲೆಕ್ಟ್ರಿಕ್ ಕಂಪನಿ ಮಾಲೀಕರಾದ ಭವೀಶ್ ಅಗರ್ವಾಲ್, ಸುಬ್ರತ್ ಕುಮಾ‌ರ್ ದಾಸ್ ಮತ್ತು ಓಲಾ ಎಲೆಕ್ನಿಕ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಏಕಸದಸ್ಯ ಪೀಠ ಈ ನಿರ್ದೇಶನ ನೀಡಿದೆ.

ತನಿಖೆಯ ನೆಪದಲ್ಲಿ ಪೊಲೀಸರು ಅರ್ಜಿದಾರರಿಗೆ ಕಿರುಕುಳ ನೀಡಬಾರದು. ಸರ್ಕಾರದ ವಕೀಲರು ತಕ್ಷಣ ಈ ಆದೇಶವನ್ನು ಸುಬ್ರಹ್ಮಣ್ಯಪುರ ಠಾಣೆಯ ಪೊಲೀಸರಿಗೆ ತಿಳಿಸಬೇಕು ಎಂದು ಆದೇಶಿಸಿರುವ ನ್ಯಾಯಾಲಯವು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿದೆ.


Share It

You cannot copy content of this page