ಬೆಂಗಳೂರು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿರುವ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ (SLP) ಸಲ್ಲಿಸಲು ಮತ್ತು ಅಲ್ಲಿಯವರೆಗೆ ಬೈಕ್ ಟ್ಯಾಕ್ಸಿ ಸಂಚಾರ ನಿರ್ಬಂಧಿಸಲು ರಾಜ್ಯ ಖಾಸಗಿ ಸಾರಿಗೆ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದೆ.
ಬೈಕ್ಗಳನ್ನು ಕ್ಯಾಬ್ ಎಂದು ಪರಿಗಣಿಸುವುದು ಸುರಕ್ಷಿತವಲ್ಲ, ಸಾರ್ವಜನಿಕ ಜೀವಕ್ಕೆ ಅಪಾಯ ಮತ್ತು ಆಟೋ/ಟ್ಯಾಕ್ಸಿ ಚಾಲಕರ ಜೀವನೋಪಾಯಕ್ಕೆ ಹೊಡೆತ ಬೀಳುತ್ತದೆ ಎಂಬುದು ಒಕ್ಕೂಟದ ಪ್ರಮುಖ ಆತಂಕವಾಗಿದೆ.
ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಾಸಗಿ ಸಾರಿಗೆ ಒಕ್ಕೂಟದ ಅಧ್ಯಕ್ಷನಟರಾಜ್ ಶರ್ಮಾ “ಹೈಕೋರ್ಟ್ ತೀರ್ಪಿನ ವ್ಯಾಖ್ಯಾನ, ಸಾರ್ವಜನಿಕ ಸುರಕ್ಷತೆ, ಸಾರಿಗೆ ನಿಯಂತ್ರಣ ಮತ್ತು ಸರಕಾರದ ನೀತಿ-ನಿರ್ಧಾರಗಳ ಮೇಲೆ ಪರಿಣಾಮ ಬೀರುತ್ತದೆ. ಇದೇ ಅಂತಿಮವಾದರೆ ಸಾರ್ವಜನಿಕರ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆಯಿದೆ” ಎಂದು ಆತಂಕ ವ್ಯಕ್ತಪಡಿಸಿದರು.
‘ಮೋಟಾರು ವಾಹನ ಕಾಯಿದೆ ಪ್ರಕಾರ ಮೋಟಾರ್ ಕ್ಯಾಬ್ ಎಂದರೆ ಪ್ರಯಾಣಿಕರ ಸುರಕ್ಷತೆ ಹಾಗೂ ವಾಣಿಜ್ಯ ಸಾರಿಗೆಗಾಗಿ ವಿನ್ಯಾಸಗೊಳಿಸಲಾದ ವಾಹನ ಎಂದು ಸ್ಪಷ್ಟವಾಗಿದೆ. ಬೈಕ್ಗಳನ್ನು ಕ್ಯಾಬ್ ಎಂದು ಪರಿಗಣಿಸಿರುವುದು ಸುರಕ್ಷಿತವಲ್ಲ. ಅಪಘಾತ ಸಂಭವಿಸಿದಾಗ ಬೇರೆ ವಾಹನಗಳಿಗಿಂತ ಮೋಟಾರ್ ಬೈಕ್ಗಳಲ್ಲಿ ಹೆಚ್ಚಿನ ಹಾನಿ ಉಂಟಾಗುತ್ತದೆ” ಎಂದು ವಿವರಿಸಿದರು. “ಮೋಟಾರು ವಾಹನ ಕಾಯಿದೆ 1988ರ ನಿಯಮಗಳಲ್ಲಿ ಬೈಕ್ ಟ್ಯಾಕ್ಸಿ ಎಂಬ ಪ್ರತ್ಯೇಕ ವರ್ಗ ಇಲ್ಲ. ಸ್ಪಷ್ಟ ಕಾನೂನು ಚೌಕಟ್ಟು ಇಲ್ಲದೆ ಬೈಕ್ ಟ್ಯಾಕ್ಸಿಗಳಿಗೆ ಅನುಮತಿಸುವುದು ಸರಿಯಲ್ಲ. ಇದನ್ನು ಕಡೆಗಣಿಸಿದರೆ ಕಾನೂನು ಚೌಕಟ್ಟು ದುರ್ಬಲವಾಗಲಿದೆ” ಎಂದರು.