ಬೆಂಗಳೂರು: ಅನುಕಂಪದ ಆಧಾರದ ಉದ್ಯೋಗ ನೀಡುವಂತೆ ಮನವಿಗಳು ಬಂದಾಗ ಹುದ್ದೆ ಖಾಲಿ ಇಲ್ಲ ಎಂಬ ಕಾರಣ ನೀಡಿ ಉದ್ಯೋಗ ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ. ಅಲ್ಲದೆ, ಅನುದಾನಿತ ಶಿಕ್ಷಣ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದ ಮೃತರ ಕುಟುಂಬಕ್ಕೆ ಅನುಕಂಪದ ಉದ್ಯೋಗ ನಿರಾಕರಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹೊರಡಿಸಿದ್ದ ಆದೇಶ ರದ್ದುಪಡಿಸಿದೆ. ಅಲ್ಲದೆ ಮೃತರು ಸೇವೆ ಸಲ್ಲಿಸುತ್ತಿದ್ದ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ ಹುದ್ದೆ ಖಾಲಿ ಇಲ್ಲದಿದ್ದರೆ ಇತರೆ ಅನುದಾನಿತ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗೆ ನೇಮಕ ಮಾಡಬೇಕೆಂದು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.
ತನ್ನ ತಂದೆ ಮೃತರಾದ ಬಳಿಕ ಅನುಕಂಪದ ಉದ್ಯೋಗಕ್ಕಾಗಿ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಕ್ರಮ ಪ್ರಶ್ನಿಸಿ ಸಂತೋಷ್ ಯಮನಪ್ಪ ವಡಕರ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ.
ಮೃತ ವ್ಯಕ್ತಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಣ ಸಂಸ್ಥೆಯಲ್ಲಿ ಖಾಲಿ ಹುದ್ದೆ ಲಭ್ಯವಿಲ್ಲದಿದ್ದಲ್ಲಿ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಶೈಕ್ಷಣಿಕ, ನೋಂದಣಿ, ಆಡಳಿತ, ಅನುದಾನ-ಸಹಾಯ ಇತ್ಯಾದಿ ನಿಯಮಗಳು- 2010ರ ಷರತ್ತು 1 (ಎ) ಮತ್ತು (ಬಿ) ಪ್ರಕಾರ, ಶಿಕ್ಷಣ ಇಲಾಖೆಯ ನಿರ್ದೇಶಕರು ಖಾಲಿ ಹುದ್ದೆ ಗುರುತಿಸಬೇಕು. ಒಂದು ವೇಳೆ ಖಾಲಿ ಹುದ್ದೆ ಲಭ್ಯವಾಗದಿದ್ದಲ್ಲಿ ಇಲಾಖೆಯ ಅಧೀನದ ಇತರೆ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಹುದ್ದೆ ಹುಡುಕಿ ಆ ಹುದ್ದೆಗೆ ನೇಮಕ ಮಾಡಿಕೊಳ್ಳಬೇಕು,” ಎಂದು ಆದೇಶಿಸಲಾಗಿದೆ.
ಈ ಪ್ರಕರಣದಲ್ಲಿ ಅರ್ಜಿದಾರರ ತಂದೆ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಯಾವುದೇ ಖಾಲಿ ಹುದ್ದೆ ಇಲ್ಲ ಎಂಬ ಕಾರಣ ನೀಡಿ ಮನವಿ ತಿರಸ್ಕರಿಸಲಾಗಿದೆ. ಇದು 2010ರ ನಿಯಮಗಳ ಷರತ್ತು 1(ಎ) ಮತ್ತು (ಬಿ) ಅಡಿಯಲ್ಲಿನ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ಅನುಕಂಪದ ಆಧಾರ ಪರಿಗಣಿಸುವ ಸಂದರ್ಭದಲ್ಲಿ ಕಟ್ಟುನಿಟ್ಟಾಗಿ ನಿಯಮ ಪಾಲಿಸಲು ಬದ್ಧರಾಗಿರಬೇಕು. ಆದರೆ, ಹುದ್ದೆ ತಿರಸ್ಕರಿಸಿರುವುದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರ ತಂದೆ ಬಾಗಲಕೋಟೆ
ಜಿಲ್ಲೆಯ ಬೇವೂರಿನಲ್ಲಿರುವ ಅನುದಾನಿತ ಆದರ್ಶ ವಿದ್ಯಾವರ್ಧಕ ಸಂಘದ ಅಧೀನದ ಆದರ್ಶ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.
ಅವರ ನಿಧನದ ಬಳಿಕ ಅವರ ಮಗ ಅನುಕಂಪದ ನೇಮಕಾತಿಗಾಗಿ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಕಾಲೇಜಿನ ಆಡಳಿತ ಮಂಡಳಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ರವಾನಿಸಿತ್ತು. ಅರ್ಜಿ ಪರಿಶೀಲಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ, ‘ಪ್ರಸ್ತುತ ಅನುಕಂಪದ ಮೇಲೆ ಉದ್ಯೋಗ ನೀಡುವುದಕ್ಕೆ ಖಾಲಿ ಹುದ್ದೆಗಳಿಲ್ಲ’ ಎಂದು ತಿಳಿಸಿ ಮನವಿ ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಲೇರಿದ್ದರು.