ಬೆಂಗಳೂರು 14 ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಹಾಗೂ ಇತ್ತೀಚಿಗೆ ನಡೆದಿದ್ದ ರೌಡಿ ಅಲಿಯಾಸ್ ‘ಹಲ್ಕುರಕ’ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ಅಲಿಯಾಸ್ ಬೆಟ್ಟಿಂಗ್ ಸಂತು ಮಹಜರ್ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಗುಂಡೇಟಿನ ಮೂಲಕ ಹೆಡೆಮುರಿ ಕಟ್ಟಿದ್ದಾರೆ.
ಕೊಲೆ ಪ್ರಕರಣ ಸಂಬಂಧ ಆರೋಪಿ ಸಂತೋಷ್ ಅಲಿಯಾಸ್ ಬೆಟ್ಟಿಂಗ್ ಸಂತು ಹೋದಾಗ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಜೆ.ಪಿ.ನಗರ ಪೊಲೀಸ್ ಠಾಣೆ ಮಹಿಳಾ ಸಬ್ ಇನ್ಸ್ಪೆಕ್ಟರ್ ಬಂಧಿಸಿದ್ದಾರೆ.
ಹತ್ಯೆ ಪ್ರಕರಣದ ಸಂಬಂಧ ಹೆಮ್ಮಿಗೆಪುರದ ನೈಸ್ ರಸ್ತೆ ಸಮೀಪ ಮಹಜರ್ ಪ್ರಕ್ರಿಯೆ ವೇಳೆ ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಕೊಲೆ ಆರೋಪಿ ಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿದ್ದಾರೆ.
ಜೂ.27 ರಂದು ಕೆ.ಆರ್.ಪುರದಲ್ಲಿ ಮಹಿಳೆಯೊಬ್ಬರಿಗೆ ಪೆಪ್ಪರ್ಸ್ಟೇ ಸಿಂಪಡಿಸಿ ಸರ ಕದ್ದ ಬಳಿಕ ಅದೇ ದಿನ ರೌಡಿ ರಾಜು ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ರೌಡಿ ಸಂತು, ಆತನ ಸಹಚರರು ಹತ್ಯೆ ಮಾಡಿದ್ದರು. ಈ ಕೊಲೆ ಬಳಿಕ ತಪ್ಪಿಸಿ ಕೊಂಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ವೃತ್ತಿಪರ ಕ್ರಿಮಿನಲ್ ಆಗಿರುವ ಸಂತು ವಿರುದ್ಧ ಕೊಲೆ, ಸರಗಳ್ಳತನ ಹಾಗೂ ಕೊಲೆ ಯತ್ನ ಸೇರಿದಂತೆ 14 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು.
ಹಲವು ವರ್ಷಗಳಿಂದ ರೌಡಿಗಳಾದ ಸಂತು ಹಾಗೂ ರಾಜು ಮಧ್ಯೆ ಘರ್ಷಣೆ ಇತ್ತು. ಈ ಹಳೇ ದ್ವೇಷ ಹಿನ್ನೆಲೆಯಲ್ಲಿ ಜೂ.27 ರಂದು ರಾಜುನನ್ನು ಸಂತು, ಆತನ ಸಹಚರರು ಕೊಂದು ನೈಸ್ ರಸ್ತೆ ಸಮೀಪ ಮಾರಕಾಸ್ತ್ರ ಬಿಸಾಡಿದ್ದರು. ಈ ಪ್ರಕರಣದಲ್ಲಿ ಬಂಧಿಸಿದ್ದ ಆರೋಪಿಗಳನ್ನು ಮಹಜರ್ಪ್ರಕ್ರಿಯೆಗೆ ಕರೆದೊಯ್ದಿದ್ದರು. ಆ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ತಪ್ಪಿಸಿಕೊಳ್ಳಲು ಆರೋಪಿ ಸಂತು ಯತ್ನಿಸಿದ್ದಾನೆ. ಕೂಡಲೇ ಆತನಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಆದರೂ ತಪ್ಪಿಸಿಕೊಳ್ಳು ಮುಂದಾದಾಗ ಆರೋಪಿ ಕಾಲಿಗೆ ಪಿಎಸ್ಐ ಗುಂಡು ಹೊಡೆದು ಬಂಧಿಸಿದ್ದಾರೆ.