ನಾಗಮಂಗಲ: ತಾಯಿಯೊಬ್ಬರು ಮಗನ ವಿರುದ್ಧ ಕಿರುಕುಳ ನೀಡುತ್ತಿರುವ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ ಆತನನ್ನು ಠಾಣೆಗೆ ಕರೆದೊಯ್ಯಲು ಬಂದ ಎ.ಎಸ್.ಐ ಜೊತೆಗೆ ಆರೋಪಿಯು ಹೊಡೆದಾಡಿಕೊಂಡಿರುವ ಘಟನೆ ನಾಗಮಂಗಲದಲ್ಲಿ ನಡೆದಿದೆ.
ಪಟ್ಟಣದ ಟಿ.ಬಿ.ವೃತ್ತದ ಬಳಿಯ ನ್ಯಾಯಾಲಯದ ಮುಂಭಾಗದ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ಆರೋಪಿ ಮಜ್ಜನಕೊಪ್ಪಲು ಪೂಜಾರಿ ಕೃಷ್ಣನನ್ನು ಅವನ ತಾಯಿ ಮರಿಯಮ್ಮ ನೀಡಿರುವ ದೂರಿನ ಮೇರೆಗೆ ವಿಚಾರಣೆ ನಡೆಸಲು ಠಾಣೆಗೆ ಕರೆದೊಯ್ಯಲು ಗ್ರಾಮಾಂತರ ಠಾಣೆಯ ಎ.ಎಸ್.ಐ ರಾಜು ಬಂದಿದ್ದಾರೆ.ಆರೋಪಿಯು ಬರಲು ಒಪ್ಪದಿದ್ದಾಗ ಬಲವಂತವಾಗಿ ಆಟೊ ಹತ್ತಿಸಲು ಎ.ಎಸ್.ಐ ಮುಂದಾದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ.
ನಂತರ ಆರೋಪಿ ಮತ್ತು ಪೊಲೀಸ್ ಅಧಿಕಾರಿಯು ಪರಸ್ಪರ ಕೊರಳಪಟ್ಟಿ ಹಿಡಿದು ಎಳೆದಾಡಿದ್ದು, ಇಬ್ಬರ ನಡುವೆ ಮಾರಾಮಾರಿ ನಡೆದಿದೆ.ಆರೋಪಿಯು “ದೂರು ಬಂದಿದ್ದರೆ ಎಫ್.ಐ.ಆರ್ ಹಾಕಿ ನಾನು ಠಾಣೆಗೆ ಬರುವುದಿಲ್ಲ” ಎಂದು ಎ.ಎಸ್.ಐ ಗೆ ಬೈದಿದ್ದಾನೆ ಎನ್ನಲಾಗಿದೆ. ನಂತರ ಸಾರ್ವಜನಿಕರೆ ಆರೋಪಿಯನ್ನು ತರಾಟೆಗೆ ತೆಗೆದುಕೊಂಡು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಇನ್ನೂ ಆರೋಪಿ ಮತ್ತು ಎಎಸ್ಐ ಇಬ್ಬರು ಕೊರಳಪಟ್ಟಿ ಹಿಡಿದು ಹೊಡೆದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.