ಬೆಂಗಳೂರು: ಜನನ ಪ್ರಮಾಣ ಪತ್ರದಲ್ಲಿ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಜನನ ಮರಣ ಪ್ರಮಾಣ ನೋಂದಣಿ ಕಾಯ್ದೆ 1969ಕ್ಕೆ ತಿದ್ದುಪಡಿ ಮಾಡಲು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ತಮ್ಮ ಮಗನ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಜನನ-ಮರಣ ನೋಂದಣಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಪೋಷಕರೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎನ್.ಎಸ್.ಸಂಜಯ್ಗೌಡ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.
ಹೆಸರು ಬದಲಾವಣೆ ಕೋರಿ ಬರುವವರ ಕುರಿತಂತೆ ಕೈಗೊಳ್ಳಬೇಕಾದಂತಹ ಕ್ರಮಗಳ ಕುರಿತು ನ್ಯಾಯಪೀಠ ಜನನ-ಮರಣ ಅಧಿಕಾರಿಗಳಿಗೆ ಹಲವು ನಿರ್ದೇಶನಗಳನ್ನು ನೀಡಿದೆ. ಕಾಯ್ದೆ ತಿದ್ದುಪಡಿಯಾಗುವವರೆಗೂ ಈ ನಿರ್ದೇಶನಗಳನ್ನು ಅನುಸರಿಸುವ ಮೂಲಕ ಹೆಸರನ್ನು ಬದಲಾವಣೆಗೆ ಅವಕಾಶ ಮಾಡಿಕೊಡಬೇಕು ಎಂದು ನ್ಯಾಯಪೀಠ ಹೇಳಿದೆ.
ಹೆಸರು ಬದಲಾವಣೆಗೆ ನೀಡಿರುವ ಪ್ರಮುಖ ನಿರ್ದೇಶನಗಳು:
• ಪೋಷಕರು ತಮ್ಮ ಮಗುವಿನ ಹೆಸರನ್ನು ಜನನ ಪ್ರಮಾಣ ಪತ್ರದಲ್ಲಿ ಬದಲಾಯಿಸಬೇಕಾದಲ್ಲಿ ಅದಕ್ಕೆ ಸಂಬಂಧಿಸಿದಂತೆ ಪ್ರಮಾಣ ಪತ್ರವನ್ನು ತರುವುದಕ್ಕೆ ಸೂಚಿಸುವುದು. ಅಂತಹ ಅರ್ಜಿಯನ್ನು ಅಧಿಕಾರಿಗಳು, ಪೋಷಕರ ಗುರುತನ್ನು ಪರಿಶೀಲಿಸಿ ಹೆಸರು ಬದಲಾವಣೆಗೆ ಮಾಡಲು ಕ್ರಮ ವಹಿಸುವುದು.
• ಈ ರೀತಿಯ ಅರ್ಜಿ ಬಂದಲ್ಲಿ ಯಾವುದೇ ದುರುದ್ದೇಶಪೂರ್ವಕವಾಗಿ ಹೆಸರು ಬದಲಾವಣೆ ಮಾಡಲಾಗುತ್ತಿಲ್ಲ ಎಂದು ಖಚಿತಪಡಿಸಿಕೊಂಡು ಹೆಸರನ್ನು ಬದಲಾವಣೆ ಮಾಡಿ ರಿಜಿಸ್ಟ್ರರ್ನಲ್ಲಿ ನಮೂದಿಸಬೇಕು. ಹೀಗಾದಲ್ಲಿ ಮೊದಲ ಹೆಸರು ಮತ್ತು ಬದಲಾವಣೆ ಹೆಸರು ರಿಜಿಸ್ಟ್ರಾರ್ನಲ್ಲಿ ಲಭ್ಯವಾಗುವಂತೆ ಮಾಡಬೇಕಾಗುತ್ತದೆ.
• ವಯಸ್ಕರ ಹೆಸರು ಬದಲಾವಣೆ ಮಾಡಿಕೊಳ್ಳುವ ಸಂದರ್ಭದಲ್ಲಿಯೂ ಇದೇ ರೀತಿಯ ನಿಯಮಗಳನ್ನು ಅನುಸರಿಸಬೇಕು. ಆಗ ಹಳೆಯ ಮತ್ತು ಹೊಸ ಹೆಸರುಗಳು ರಿಜಿಸ್ಟ್ರಾರ್ನಲ್ಲಿ ಇರುವುದರಿಂದ ದುರುಪಯೋಗವನ್ನು ತಡೆಯಬಹುದಾಗಿದೆ ಎಂದ ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.
ಪ್ರಕರಣದ ಹಿನ್ನೆಲೆ: ಉಡುಪಿಯ ಪೋಷಕರು ಮೊದಲು ತಮ್ಮ ಮಗನಿಗೆ ಅಧ್ರಿತ್ ಭಟ್ ಎಂದು ನಾಮಕರಣ ಮಾಡಿದ್ದರು. ಆದರೆ ಈ ಹೆಸರು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂಕ್ತವಲ್ಲ. ಹೀಗಾಗಿ ಮಗನ ಹೆಸರನ್ನು ಶ್ರೀಜಿತ್ ಭಟ್ ಎಂಬುದಾಗಿ ಬದಲಾವಣೆ ಮಾಡುವುದಕ್ಕೆ ಪೋಷಕರು ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು. ಈ ಮನವಿಯನ್ನು ಜನನ ಮರಣ ನೋಂದಣಾಧಿಕಾರಿಗಳು ತಿರಸ್ಕರಿಸಿ ಹಿಂಬರಹ ನೀಡಿದ್ದರು. ಆದ್ದರಿಂದ ತಮ್ಮ ಮಗನ ಹೆಸರನ್ನು ಬದಲಾವಣೆ ಮಾಡುವುದಕ್ಕೆ ನಿರ್ದೇಶನ ನೀಡಲು ಸೂಚನೆ ನೀಡಲು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ನ್ಯಾಯಪೀಠ ಬಾಲಕನ ಹೆಸರನ್ನು ಬದಲಾಯಿಸಿ ಜನನ ಪ್ರಮಾಣ ಪತ್ರವನ್ನು ನೀಡುವಂತೆ ನಿರ್ದೇಶನ ನೀಡಿ ಆದೇಶಿಸಿದೆ.