ಸುದ್ದಿ

ಗೂಂಡಾ ಕಾಯ್ದೆ ಅಡಿ ರೌಡಿ ಶೀಟರ್ ಅರೆಸ್ಟ್ ; ಪೊಲೀಸರ ಬಂಧನ ಆದೇಶ ಎತ್ತಿ ಹಿಡಿದ ಹೈಕೋರ್ಟ್

Share It

ಬೆಂಗಳೂರು: ಕೇಸ್ ದಾಖಲಿಸಿದ 164 ದಿನಗಳ ಬಳಿಕ ರೌಡಿ ಶೀಟರ್‌ ಓರ್ವನನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ.

ರೌಡಿ ಶೀಟರ್ ರಾಜೇಶ್‌ ಎಂಬಾತನ ಬಂಧನ ಪ್ರಶ್ನಿಸಿ ಹಾಗೂ ಆತನನ್ನು ಬಿಡುಗಡೆ ಮಾಡಲು ನಿರ್ದೇಶಿಸುವಂತೆ ಕೋರಿ ಆತನ ಪತ್ನಿ ಪ್ರಿಯದರ್ಶಿನಿ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, “ಬಂಧನ ಆದೇಶವು ಸಂಪೂರ್ಣವಾಗಿ ಮುಂಜಾಗ್ರತಾ ಕ್ರಮವಾಗಿದ್ದು, ಸಮಾಜಕ್ಕೆ ರಕ್ಷಣೆ ಒದಗಿಸುವ ಉದ್ದೇಶದಿಂದ ಮಾಡಲಾಗಿದೆ. ವ್ಯಕ್ತಿಗತ ಸ್ವಾತಂತ್ರ್ಯ ಮತ್ತು ಸಮಾಜದ ಅವಶ್ಯಕತೆ ನಡುವೆ ಸಮಾನತೆ ಸಾಧಿಸಬೇಕಿದೆ. ಈ ನೆಲೆಯಲ್ಲಿ ಬಂಧನ ಆದೇಶವನ್ನು ಎತ್ತಿ ಹಿಡಿಯಬೇಕಿದೆ ಎಂದು ತಿಳಿಸಿದೆ.

ಪ್ರಕರಣದ ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲರು, ರಾಜೇಶ್‌ ವಿರುದ್ಧ 2024ರ ಆಗಸ್ಟ್‌ 18ರಂದು ಅಪರಾಧ ಪ್ರಕರಣ ದಾಖಲಾಗಿದೆ. ಅದಾದ 164 ನಂತರ ಗೂಂಡಾ ಕಾಯ್ದೆ ಅಡಿ ಬಂಧನ ಆದೇಶ ಮಾಡಲಾಗಿದೆ. ಈ 164 ದಿನಗಳಲ್ಲಿ ಅರ್ಜಿದಾರ ರಾಜೇಶ್, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತಂದಿರುವುದನ್ನು ಸಮರ್ಥಿಸುವ ಯಾವುದೇ ದಾಖಲೆ ಇಲ್ಲ. ಆದ್ದರಿಂದ ಸರ್ಕಾರದ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು.

ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಪೊಲೀಸ್‌ ಇಲಾಖೆ ಸಾಕಷ್ಟು ಸಮಯಾವಕಾಶ ನೀಡಿದ್ದರೂ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ರಾಜೇಶ್‌ ನಿಲ್ಲಿಸಿರಲಿಲ್ಲ. ಇದರಿಂದ ಅನ್ಯ ಮಾರ್ಗವಿಲ್ಲದ ಗೂಂಡಾ ಕಾಯ್ದೆ ಅಡಿ ಅತನನ್ನು ಬಂಧಿಸಲಾಗಿದೆ. ಸಾರ್ವಜನಿಕ ವ್ಯವಸ್ಥೆಗೆ ಅಪಾಯ ಉಂಟಮಾಡುವಂತಹ ಚಟುವಟಿಕೆಗಳನ್ನು ಪರಿಗಣಿಸಿಯೇ ಬಂಧಿಸಲಾಗಿದೆ. ಆತನ ವಿರುದ್ಧ 12 ಅಪರಾಧ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಮೂರು ಕೊಲೆ ಯತ್ನ, ಹಲ್ಲೆ ಪ್ರಕರಣಗಳಿವೆ. ಮಾರಕಾಸ್ತ್ರಗಳೊಂದಿಗೆ ಸುತ್ತಾಡುತ್ತಿದ್ದ ಆತನ ನಡೆಯಿಂದ ಜನರಲ್ಲಿ ಭೀತಿ ಉಂಟಾಗಿತ್ತು ಎಂದು ನ್ಯಾಯಾಲಯಕ್ಕೆ ವಿವರಿಸಿದ್ದರು.

ಪ್ರಕರಣದ ಹಿನ್ನೆಲೆ: ರಾಜೇಶ್‌ ಅಲಿಯಾಸ್ ಮೊಟ್ಟೆ ವಿರುದ್ಧ ಬೆಂಗಳೂರಿನ ಕೆಂಪೇಗೌಡ ನಗರ ಠಾಣೆ ಪೊಲೀಸರು 2023ರ ಡಿಸೆಂಬರ್‌ 13ರಂದು ಎ ಕೆಟಗರಿ ರೌಡಿ ಶೀಟ್‌ ತೆರೆದಿದ್ದರು. 2018ರಿಂದ ಸಮಾಜ ವಿರೋಧಿ ಮತ್ತು ಅಪರಾಧ ಚಟುವಟಿಕೆಗಳು ಭಾಗಿಯಾಗಿ, ಮನುಷ್ಯನ ಜೀವ ಮತ್ತು ಆಸ್ತಿಗೆ ಅಪಾಯ ಉಂಟು ಮಾಡುವ ಮೂಲಕ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾನೆ. ಬೆಂಗಳೂರಿನ ವಿವಿಧ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 12 ಹೀನಾಯ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿಸಿದ್ದ ಪೊಲೀಸರು, ಗೂಂಡಾ ಕಾಯಿದೆ ಅಡಿ 2025ರ ಜನವರಿ 29ರಂದು ಬಂಧಿಸಿದ್ದರು. ಬಳಿಕ ಹೈಕೋರ್ಟ್ ಮೊರೆ ಹೋಗಿದ್ದ ಆತನ ಪತ್ನಿ, ತನ್ನ ಗಂಡನನ್ನು ಪೊಲೀಸರು ಅಕ್ರಮ ಬಂಧನದಲ್ಲಿ ಇರಿಸಿದ್ದಾರೆ. ಆದ್ದರಿಂದ ತಕ್ಷಣವೇ ಬಿಡುಗಡೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಹೇಬಿಯಸ್ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು.
(WRIT PETITION HABEAS CORPUS NO.31 OF 2025)


Share It

You cannot copy content of this page