ಉತ್ತರಾಖಂಡದ ಋಷಿಕೇಶ ಸಮೀಪದ ರೆಸಾರ್ಟ್ ಉದ್ಯೋಗಿ ಅಂಕಿತಾ ಭಂಡಾರಿ ಹತ್ಯೆ ಪ್ರಕರಣ ಸಂಬಂಧ ಬಿಜೆಪಿ ಮಾಜಿ ನಾಯಕನ ಪುತ್ರ ಸೇರಿ ಮೂವರು ದೋಷಿಗಳಿಗೆ ಪೌರಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಆರೋಪಿಗಳಾದ ರೆಸಾಟ್೯ ಮಾಲೀಕ ಪುಲಕಿತ್ ಆರ್ಯಾ, ಸಹಚರ ಸೌರಬ್ ಭಾಸ್ಕರ್, ಅಂಕಿತಾ ಗುಪ್ತಾ ಜೀವಾವಧಿ ಶಿಕ್ಷೆಗೆ ಒಳಗಾದವರು.ಜೀವಾವಧಿ ಶಿಕ್ಷೆಗೆ ಗುರಿಯಾದ ಪುಲಕಿತ್ ಆರ್ಯ ಉತ್ತರಾಖಂಡ ಬಿಜೆಪಿ ಮುಖಂಡ ವಿನೋದ್ ಆರ್ಯ ಪುತ್ರ. ಘಟನೆ ಬಳಿಕ ವಿನೋದ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶೆ ರೀನಾ ನೇಗಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದರು ಮೃತ ಅಂಕಿತಾ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ನೀಡಿದರು.
ಪೌರಿ ಗರ್ವಾಲ್ ಜಿಲ್ಲೆಯ ವನತಾರಾ ರೆಸಾರ್ಟ್ ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಅಂಕಿತಾ ಭಂಡಾರಿ (19) ಅವರನ್ನು 2022ರ ಸೆಪ್ಟೆಂಬರ್ 18 ರಂದು ಹತ್ಯೆ ಮಾಡಲಾಗಿತ್ತು. ಆರು ದಿನದ ಬಳಿಕ ಆಕೆಯ ಮೃತದೇಹ ರೆಸಾರ್ಟ್ ಸಮೀಪದ ಕಾಲುವೆಯೊಂದರಲ್ಲಿ ಪತ್ತೆಯಾಗಿತ್ತು.
ಈ ಸಂಬಂಧ ಕೊಲೆ ಪ್ರಕರಣದ ದಾಖಲಿಸಿಕೊಂಡಿದ್ದ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಕೋಟ್ ಗೆ 500 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ರೆಸಾರ್ಟ್ ಬರುವ ವಿಐಪಿ ಅತಿಥಿಗಳಿಗೆ ವಿಶೇಷ ಸೇವೆ ಸಲ್ಲಿಸುವಂತೆ ಅಂಕಿತಾ ಮೇಲೆ ಪುಲಕಿತ್ ಆರ್ಯ ಒತ್ತಡ ಹೇರಿದ್ದರು. ಕೆಲವು ಅತಿಥಿಗಳಿಗೆ ಬಲವಂತದಿಂದ ಸೇವೆ ಕೊಡಿಸಿದ್ದರು. ಅತಿಥಿಯಾಗಿ ಬಂದಿದ್ದ ವ್ಯಕ್ತಿಯೊಬ್ಬರು ಬಲವಂತವಾಗಿ ಅವರನ್ನು ತಬ್ಬಿಕೊಂಡಿದ್ದರು. ರೆಸಾರ್ಟ್ ಮಾಲಿಕರ ವಿರುದ್ಧ ಅಂಕಿತಾ ತಿರುಗಿ ಬಿದ್ದಾಗ ಹತ್ಯೆ ಮಾಡಲಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಆರೋಪಿಸಲಾಗಿತ್ತು.