ಬೆಂಗಳೂರು: ಮಹಿಳೆಯ ಚಿನ್ನದ ಸರ ದೋಚಿದ ಆರೋಪದಡಿ ಹೆಡ್ ಕಾನ್ಸ್ಟೆಬಲ್ ಸೇರಿ ಇಬ್ಬರನ್ನು ಅವಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಡಿ.ಜೆ. ಹಳ್ಳಿ ಠಾಣೆಯ ಹೆಡ್ ಕಾನ್ಸ್ಟೆಬಲ್ ಸತ್ಯಣ್ಣ ಮತ್ತು ಆಟೋ ಚಾಲಕ ಜಗದೀಶ್ ಚಿನ್ನದ ಸರ ದೋಚಿದ ಆರೋಪಿಗಳಾಗಿದ್ದು, ಇವರಿಂದ 37 ಗ್ರಾಂ ತೂಕದ ಚಿನ್ನದ ಸರ ಜಪ್ತಿ ಮಾಡಲಾಗಿದೆ.
ಆರೋಪಿ ಆಟೋ ಚಾಲಕ ಜಗದೀಶ್ ಮತ್ತು ಸಂತ್ರಸ್ತೆ ಅವಲಹಳ್ಳಿ ಬಾಡಿಗೆ ಮನೆಯಲ್ಲಿ ಸಹಜೀವನ ನಡೆಸುತ್ತಿದ್ದರು. ಡಿ.ಜೆ. ಹಳ್ಳಿ ಠಾಣೆಯ ಮುಖ್ಯಪೇದೆಗೆ ಜಗದೀಶ್ ಪರಿಚಿತನಾಗಿದ್ದ. ಸಂತ್ರಸ್ತೆಯ ನಡತೆ ಬಗ್ಗೆ ಅನುಮಾನಗೊಂಡ ಜಗದೀಶ್, ಆಕೆ ಜತೆ ಜಗಳವಾಡುತ್ತಿದ್ದ. ಈ ವಿಚಾರವಾಗಿ ಆಕೆಗೆ ಸತ್ಯಣ್ಣ ಬೆದರಿಕೆ ಹಾಕಿದ್ದ. ಜಗಳದ ವೇಳೆ ಸಂತ್ರಸ್ತೆಯ 37 ಗ್ರಾಂ ತೂಕದ ಚಿನ್ನದ ಸರವನ್ನು ಜಗದೀಶ್ ಕಿತ್ತುಕೊಂಡು ಸತ್ಯಣ್ಣನಿಗೆ ನೀಡಿದ್ದ. ಬಳಿಕ ಸತ್ಯಣ್ಣ ಆ ಸರವನ್ನು ಖಾಸಗಿ ಫೈನಾನ್ಸ್ನಲ್ಲಿ ಅಡಮಾನ ವಿರಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.