ತುಮಕೂರು: ಜಮೀನಿನ ಖಾತೆ ಬದಲಾವಣೆ ಮಾಡಿಕೊಡಲು 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕ್ಯಾತ್ಸಂದ್ರ ವೃತ್ತದ ಗ್ರಾಮ ಆಡಳಿತಾಧಿಕಾರಿ ಮಂಜುನಾಥ್ ಲೋಕಾಯುಕ್ತ ಬಲೆ ಬಿದ್ದಿದ್ದಾರೆ.
ತಾಲ್ಲೂಕಿನ ಊರ್ಡಿಗೆರೆ ಹೋಬಳಿ ಮಾಚನಹಳ್ಳಿ ಗ್ರಾಮದ ಬಿ. ಯೋಗೀಶ್ ಅವರ ತಾತನ ಹೆಸರಿನಲ್ಲಿದ್ದ 38 ಗುಂಟೆ ಜಮೀನನ್ನು ಅವರ ತಂದೆಯ ಹೆಸರಿಗೆ ವರ್ಗಾಯಿಸಲು ಗ್ರಾಮ ಆಡಳಿತಾಧಿಕಾರಿ ಮಂಜುನಾಥ್ ಅವರನ್ನು ಸಂಪರ್ಕಿಸಿದ್ದರು. ಈ ವೇಳೆ ಮಂಜುನಾಥ್ ಜಮೀನಿನ ಖಾತೆ ವರ್ಗಾವಣೆಗೆ ಮುಂಗಡವಾಗಿ ₹10 ಸಾವಿರ ಲಂಚವನ್ನು ವಸೂಲಿ ಮಾಡಿಕೊಂಡು, ಇನ್ನೂ ₹10 ಸಾವಿರ ಕೊಡುವಂತೆ ಬೇಡಿಕೆ ಇಟ್ಟಿದ್ದರಂತೆ.
ಈ ಸಂಬಂಧ ಹೆಚ್ಚುವರಿ ಹಣ ನೀಡಲು ಯೋಗೀಶ್ ಸಮ್ಮತಿಸದೆ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು. ಅದರಂತೆ, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಊರ್ಡಿಗೆರೆ ಹೋಬಳಿ ಕಂದಾಯ ನಿರೀಕ್ಷಕರ ಕಚೇರಿ ಬಳಿ ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಡಿವೈಎಸ್ಪಿ ಕೆ.ಎಂ. ಸಂತೋಷ್ ಅವರು ನೇತೃತ್ವದ ತಂಡ ತಕ್ಷಣ ದಾಳಿ ನಡೆಸಿ ಮಂಜುನಾಥ ಅವರನ್ನು ಸ್ಥಳದಲ್ಲೇ ವಶಕ್ಕೆ ಪಡೆದಿದ್ದಾರೆ.