ಬೆಂಗಳೂರು: ಮನೆಯಲ್ಲಿ ಸಂಭ್ರಮದ ವಾತಾವರಣ, ಮದುವೆಗೆ ಹೋಗಲು ಎಲ್ಲರೂ ರೆಡಿಯಾಗುತ್ತಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ತಂದೆಯ ಒಂದು ಸಣ್ಣ ಮರೆವು ಕಂದಮ್ಮನ ಪ್ರಾಣವನ್ನೇ ಬಲಿ ಪಡೆದಿದೆ. ಈ ಮನಕಲಕುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬ್ಯಾಡರಹಳ್ಳಿಯ ನಿವಾಸಿಗಳಾದ ಅಣ್ಣಯ್ಯ ಮತ್ತು ಋತು ದಂಪತಿಯ ಎರಡೂವರೆ ವರ್ಷದ ಪುತ್ರ ಚಿರಾಗ್ ಮೃತ ದುರ್ದೈವಿ. ಭಾನುವಾರ ಮನೆಯಲ್ಲಿ ಮದುವೆ ಕಾರ್ಯಕ್ರಮವಿದ್ದ ಕಾರಣ ಇಡೀ ಕುಟುಂಬ ಸಿದ್ಧತೆಯಲ್ಲಿತ್ತು. ತಾಯಿ ಮಗುವನ್ನು ಸ್ನಾನ ಮಾಡಿಸಿ, ಅಂದವಾಗಿ ರೆಡಿ ಮಾಡಿ ಆಟವಾಡಲು ಬಿಟ್ಟಿದ್ದರು.
ತಂದೆ ಅಣ್ಣಯ್ಯ ಅವರು ಮನೆಯ ಹೊರಗಡೆ ಕಾರ್ ವಾಶ್ ಮಾಡುತ್ತಿದ್ದರು.ನೀರಿಗಾಗಿ ಸಂಪ್ನ ಮುಚ್ಚಳ ತೆಗೆದಿದ್ದ ಅವರು, ಕೆಲಸ ಮುಗಿದ ನಂತರ ಆತುರದಲ್ಲಿ ಮುಚ್ಚಳ ಮುಚ್ಚುವುದನ್ನು ಮರೆತು ಮನೆ ಒಳಗೆ ಹೋಗಿದ್ದಾರೆ.ಆಟವಾಡುತ್ತಾ ಬಂದ ಮಗು ಚಿರಾಗ್, ಆಕಸ್ಮಿಕವಾಗಿ ತೆರೆದಿದ್ದ ಸಂಪ್ಗೆ ಬಿದ್ದಿದ್ದಾನೆ.
ಕೆಲ ಹೊತ್ತಿನ ಬಳಿಕ ಮಗು ಕಾಣದಿದ್ದಾಗ ಹುಡುಕಾಡಿದ ಪೋಷಕರಿಗೆ ಸಂಪ್ನಲ್ಲಿ ಮಗುವಿನ ಶವ ಕಂಡುಬಂದಿದೆ.
ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಮಗುವಿನ ಸಾವಿನಿಂದಾಗಿ ಆಕ್ರಂದನ ಮುಗಿಲು ಮುಟ್ಟಿದೆ.