ಮಂಡ್ಯ: ಮೇಲುಕೋಟೆಯ ಯೋಗಾನರಸಿಂಹಸ್ವಾಮಿ ಬೆಟ್ಟದ ದೇವಾಲಯದ ಹುಂಡಿ ಹಣ ಮತ್ತು ಚಿನ್ನಾಭರಣ ಕಳ್ಳತನದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನ ಅರ್ಚಕ ಸೇರಿದಂತೆ ಐವರನ್ನು ಕರ್ತವ್ಯ ಲೋಪ ಆರೋಪದ ಮೇರೆಗೆ ಅಮಾನತು ಮಾಡಿ ದೇವಾಲಯದ ಕಾರ್ಯನಿರ್ವಾಹಕಾಧಿಕಾರಿ ಶೀಲಾ ಆದೇಶಿಸಿದ್ದಾರೆ.
ಜನವರಿ 11ರಂದು ಬೆಟ್ಟದ ಯೋಗಾನರಸಿಂಹಸ್ವಾಮಿ ದೇವಾಲಯದಲ್ಲಿ ಸಿಸಿಟಿವಿ ಕ್ಯಾಮೆರಾ ಹಾಗೂ ರಹಸ್ಯ ಕ್ಯಾಮೆರಾದ ಡಿವಿಆರ್ ನಾಶಪಡಿಸಿ, ಹುಂಡಿ ಹಣ ಕಳ್ಳತನವಾಗಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ದೇವಾಲಯದ ಆರ್ಚಕ, ಪಾರುಪತ್ತೆಗಾರ, ಮಣೆಗಾರ ಹಾಗೂ ಇಬ್ಬರು ಕಾವಲುಗಾರರು ಸೇರಿದಂತೆ ಒಟ್ಟು 6 ಮಂದಿಯ ಮೇಲೆ ಮೇಲುಕೋಟೆಯ ಪೊಲೀಸ್ ಠಾಣೆಯಲ್ಲಿ ದೇವಾಲಯ ಇಒ ದೂರು ದಾಖಲಿಸಿದ್ದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಬುಧವಾರ ದೇವಾಲಯದ ಆಡಳಿತ ಮಂಡಳಿ ಸಭೆ ನಡೆಸಲಾಗಿತ್ತು. ಘಟನೆ ಸಂಬಂಧ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಜಿಲ್ಲಾಧಿಕಾರಿ ಆದೇಶದ ಮೇರೆಗೆ ಆರು ಮಂದಿಯನ್ನು ಅಮಾನತು ಮಾಡಲಾಗಿದೆ ಎಂದು ದೇವಾಲಯದ ಕಾರ್ಯನಿರ್ವಾಹಕಾಧಿಕಾರಿ ಶೀಲಾ ತಿಳಿಸಿದ್ದಾರೆ.