ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಲೆಕ್ಕ ಪರಿಶೋಧಕ ಚಂದ್ರಶೇಖರ್ ಆತ್ಮಹತ್ಯೆಗೆ ಆಡಳಿತ ನಿರ್ದೇಶಕ ಪದ್ಮನಾಭ ಮತ್ತು ಲೆಕ್ಕಾಧಿಕಾರಿ ಪರುಶರಾಮ್ ಕಾರಣ ಎಂಬ ವಿಷಯ ವಿಶೇಷ ತನಿಖಾ (SIT) ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಿದೆ.
ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾಸತ್ರ ನ್ಯಾಯಾಲಯಕ್ಕೆ ಎಸ್ಐಟಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ. ಆರೋಪ ಪಟ್ಟಿಯಲ್ಲಿ ನಿಗಮದ ಹಗರಣದಲ್ಲಿ ಒಂದಷ್ಟು ಹಣವನ್ನು ಚಂದ್ರಶೇಖರ್ ಪಡೆದಿದ್ದಾರೆ ಎಂದು ಉಲೇಖಿಸಲಾಗಿದೆ.
ಚಾರ್ಜ್ ಶೀಟ್ನಲ್ಲಿ ಏನಿದೆ?
ಚಂದ್ರಶೇಖರ್ ಅವರನ್ನು ಗೋವಾ ಮತ್ತು ಹೈದರಾಬಾದ್ಗೆ ಕರೆದುಕೊಂಡು ಹೋಗಿ ಪದ್ಮನಾಭ್ ಮತ್ತು ಪರಶುರಾಮ್ ಒತ್ತಡ ಹಾಕಿದ್ದರು. ನೀನು ಹಣವನ್ನು ಪಡೆದುಕೊಂಡಿದ್ದಿ. ಪ್ರಕರಣ ಬೆಳಕಿಗೆ ಬಂದರೆ ನೀನೊಬ್ಬನೇ ಜೈಲಿಗೆ ಹೋಗಬೇಕಾಗುತ್ತದೆ. ನಿನ್ನ ವಿರುದ್ಧ ನಾವೇ ದೂರು ಕೊಡುತ್ತೇವೆ ಎಂದು ಭಯ ಬೀಳಿಸಿದ್ದರು. ಜೈಲಿಗೆ ಹೋಗಬಹುದು ಎಂಬ ಭಯಕ್ಕೆ ಬಿದ್ದು ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ.
300 ಪುಟಗಳ ದೋಷಾರೋಪ ಪಟ್ಟಿಗೆ ಚಂದ್ರಶೇಖರ್ ಪತ್ನಿ ಮತ್ತು ನಿಗಮದ ಅಧಿಕಾರಿಗಳನ್ನು ಎಸ್ಐಟಿ ಸಾಕ್ಷ್ಯವನ್ನಾಗಿ ಮಾಡಿದೆ. ಈ ಪ್ರಕರಣದಲ್ಲೂ ಮಾಜಿ ಸಚಿವ ನಾಗೇಂದ್ರ ಅವರ ಹೆಸರನ್ನು ಎಸ್ಐಟಿ ಕೈ ಬಿಟ್ಟಿದೆ.