ಬೆಂಗಳೂರು: ಎಂಟು ವರ್ಷಗಳ ಹಿಂದೆ ವಿದ್ಯಾರ್ಥಿಗಳ ಶುಲ್ಕ ದುರುಪಯೋಗ ಪಡಿಸಿಕೊಂಡಿದ್ದ ಪ್ರಕರಣವೊಂದನ್ನು ಬೆಂಗಳೂರು ವಿ.ವಿ ನ್ಯಾಯಾಂಗ ತನಿಖೆಗೆ ನೀಡಿದೆ.
ಎಸ್ಎಪಿ ಕೋಸ್೯(ಸಿಸ್ಟಮ್ ಅಪ್ಲಿಕೇಶನ್ ಪ್ರೋಗ್ರಾಂ) ಕಲಿಕೆಗೆ ಎಂಬಿಎ ವಿದ್ಯಾರ್ಥಿಗಳು ಪಾವತಿಸಿದ್ದ ಶುಲ್ಕವನ್ನು ಎಂಟು ವರ್ಷಗಳ ಹಿಂದೆ ದುರುಪಯೋಗಪಡಿಸಿಕೊಂಡಿದ್ದ, ಈಗ ನಿವೃತ್ತರಾಗಿರುವ ಪ್ರಾಧ್ಯಾಪಕ ಕೆ.ಜನಾರ್ದನಂ ವಿರುದ್ಧ ನ್ಯಾಯಾಂಗ ತನಿಖೆ ನಡೆಸಲು ಬೆಂಗಳೂರು ವಿಶ್ವವಿದ್ಯಾನಿಲಯ ನಿರ್ಧರಿಸಿದೆ.
2016-17ನೇ ಸಾಲಿನಲ್ಲಿ ಎಂಬಿಎ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ₹2.8 ಕೋಟಿ ಶುಲ್ಕದಲ್ಲಿ ಸ್ವಲ್ಪ ಭಾಗವನ್ನು ‘ಕೆನರಾ ಬ್ಯಾಂಕ್ ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್’ಗೆ ಪಾವತಿಸಿ, ಉಳಿದ ಭಾಗವನ್ನು ಅವರ ವೈಯಕ್ತಿಕ ಖಾತೆಗೆ ಜಮಾ ಮಾಡಿಕೊಂಡಿದ್ದರು. ಸಿಎಜಿ ವರದಿಯೂ ಈ ಕುರಿತು ಆಕ್ಷೇಪಿಸಿತ್ತು. ವಿಧಾನ ಪರಿಷತ್ ರಚಿಸಿದ್ದ ಸದನ ಸಮಿತಿ ಸಹ ಕ್ರಮಕ್ಕೆ ಸೂಚಿಸಿತ್ತು.
ಈ ಪ್ರಕರಣದ ನಂತರ ಜನಾರ್ದನಂ ಅವರು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವರಾಗಿ ನೇಮಕವಾಗಿದ್ದರು.