ಕಣ್ಣೂರು: ಕೇರಳದ ಕಣ್ಣೂರಿನಲ್ಲಿ 19 ವರ್ಷಗಳ ಹಿಂದೆ ನಡೆದಿದ್ದ ಸಿಪಿಐ(ಎಂ) ಕಾರ್ಯಕರ್ತ ರಿಜಿತ್ ಶಂಕರನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೆಸ್ಸೆಸ್ ಕಾರ್ಯಕರ್ತರಿಗೆ ತಲಶ್ಶೇರಿಯ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಕನ್ನಪುರಂ ಚುಂಡಾದಲ್ಲಿ 2005ರ ಅಕ್ಟೋಬರ್ 3ರಂದು ರಿಜಿತ್ ಶಂಕರನ್(25) ತನ್ನ ಸ್ನೇಹಿತರ ಜೊತೆಗೆ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಚುಂಡಾದ ದೇವಸ್ಥಾನದ ಬಳಿ ಹೊಂಚು ಹಾಕಿ ಕುಳಿತುಕೊಂಡಿದ್ದ ಆರೆಸ್ಸೆಸ್ ಕಾರ್ಯಕರ್ತರು ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿದ್ದರು. ದಾಳಿಯಲ್ಲಿ ರಿಜಿತ್ ಶಂಕರನ್ ಅವರ ಮೂವರು ಸ್ನೇಹಿತರು ಕೂಡ ಗಾಯಗೊಂಡಿದ್ದರು.
ಜನವರಿ 4ರಂದು ತಲಶ್ಶೇರಿಯ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆರೋಪಿಗಳನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿತ್ತು. ಪ್ರಕರಣದಲ್ಲಿ ಒಟ್ಟು 10 ಆರೋಪಿಗಳಿದ್ದು, ಅವರಲ್ಲಿ ಓರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ.
ರಿಜಿತ್ ಕೊಲೆ ಪ್ರಕರಣದ ಆರೋಪಿಗಳಾದ ಸುಧಾಕರನ್ (57), ಜಯೇಶ್ (41), ರಂಜಿತ್ (44), ಅಜೀಂದ್ರನ್ (51), ಅನಿಲ್ ಕುಮಾರ್ (52), ರಾಜೇಶ್ (46), ಶ್ರೀಕಾಂತ್ (47), ಶ್ರೀಜಿತ್ (43), ಮತ್ತು ಭಾಸ್ಕರನ್(67)ಗೆ ತಲಶ್ಶೇರಿಯ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.