ಕಲಬುರ್ಗಿ: ಮುಂದಿನ 6-7ತಿಂಗಳಲ್ಲಿ 1,200 ಪಿಎಸ್ಐ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತೇವೆ. ರಾಜ್ಯದಲ್ಲಿ 10 ರಿಂದ 12 ಸಾವಿರ ಪೋಲಿಸ್ ಸಿಬ್ಬಂದಿಗಳ ಕೊರತೆ ಇದೆ. ಅದನ್ನು ಕೂಡ ಭರ್ತಿ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ ಎಂದು ಕಲಬುರ್ಗಿಯಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಕಾನೂನು ಸುವ್ಯವಸ್ಥೆ ಹಾಳಾಗಿದೆ ಅಂತಾರೆ. ಅಂತಹ ಒಂದು ಉದಾಹರಣೆ ಕೊಡಿ? ಸುಮ್ಮನೆ ಬೇಕಾಬಿಟ್ಟಿಯಾಗಿ ಆರೋಪಗಳನ್ನ ಮಾಡಬಾರದು. ಅವರ ಕಾಲದಲ್ಲಿ ಎಷ್ಟು ಆಗಿದೆ ಎಂಬುವುದರ ಬಗ್ಗೆ ದಾಖಲೆ ಇದೆ. ಅದನ್ನು ಸಮಯ ಬಂದಾಗ ನಾವು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.
ಮಂಗಳೂರು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, 48 ಗಂಟೆಯಲ್ಲಿ ಮಂಗಳೂರು ದರೋಡೆ ಪ್ರಕರಣವನ್ನ ಬೇಧಿಸಿದ್ದೇವೆ. ಬೀದರ್ ದರೋಡೆ ಕೇಸ್ ಕೂಡ ಕೊನೇ ಹಂತದಲ್ಲಿದೆ. ಆದಷ್ಟು ಬೇಗ ನಮ್ಮ ಪೊಲೀಸರು ಅವರನ್ನು ಸಹ ಅರೆಸ್ಟ್ ಮಾಡುತ್ತಾರೆ ಎಂದು ಜಿ.ಪರಮೇಶ್ವರ್ ಹೇಳಿದರು.