ಬೆಂಗಳೂರು: ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳದ ಆರೋಪದಲ್ಲಿ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಇಬ್ಬರು ಗ್ರಾಮ ಆಡಳಿತ ಅಧಿಕಾರಿಗಳನ್ನು ಅಮಾನತುಗೊಳಿಸಿರುವ ಜಿಲ್ಲಾಧಿಕಾರಿ ಜಿ. ಜಗದೀಶ್, ಇನ್ನಿಬ್ಬರು ರಾಜಸ್ವ ನಿರೀಕ್ಷಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಚಿಕ್ಕಜಾಲ ಹೋಬಳಿ ಬೆಟ್ಟಹಲಸೂರು ವೃತ್ತದ ಗ್ರಾಮ ಆಡಳಿತ ಅಧಿಕಾರಿ ರೂಪೇಶ್, ತರಬನಹಳ್ಳಿ ವೃತ್ತ ಮತ್ತು ಹುತ್ತಹಳ್ಳಿ ವೃತ್ತದ (ನಿಯೋಜನೆ) ಬಿ.ಎ. ರಘುನಾಥ ಅಮಾನತುಗೊಂಡಿರುವ ಅಧಿಕಾರಿಗಳು.
ಬೆಟ್ಟಹಲಸೂರು ಮತ್ತು ನೆಲಕುಂಟೆ ಗ್ರಾಮದಲ್ಲಿ ವಿಶ್ವೇ ಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನವರು ಮಾಡಿರುವ ಒತ್ತುವರಿಯನ್ನು ಇತ್ತೀಚೆಗೆ ತೆರವುಗೊಳಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದ ಅಧಿಕಾರಿ ರೂಪೇಶ್, ಜಮೀನು ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಮರ್ಪಕವಾಗಿ ಉತ್ತರ
ನೀಡಿರಲಿಲ್ಲ. ಅದೇ ರೀತಿ ಚಿಕ್ಕಜಾಲ ಗ್ರಾಮದ ಸರ್ಕಾರಿ ಗೋಮಾಳದ ಜಮೀನು ಒತ್ತುವರಿ ತೆರವುಗೊಳಿಸುವ ವೇಳೆ ಸ್ಥಳದಲ್ಲಿದ್ದ ಅಧಿಕಾರಿ ಬಿ.ಎ. ರಘುನಾಥ ಅವರು ಸೂಕ್ತ ಉತ್ತರ ನೀಡಿರಲಿಲ್ಲ.
ಈ ಎರಡೂ ಪ್ರಕರಣಗಳಲ್ಲಿ ಸ್ಥಳೀಯ ಶಾಸಕರು ದೂರು ನೀಡಿದ್ದರೂ ಒತ್ತುವರಿ ತೆರವಿಗೆ ಸೂಕ್ತ ಕ್ರಮ ಕೈಗೊಳ್ಳದ ಆರೋಪದಲ್ಲಿ ಬೆಟ್ಟಹಲಸೂರು ವೃತ್ತದ ರಾಜಸ್ವ ೩ ನಿರೀಕ್ಷಕ ರಂಗೇಗೌಡ ಮತ್ತು ದೊಡ್ಡಜಾಲ ವೃತ್ತದ ರಾಜಸ್ವ ನಿರೀಕ್ಷಕ ಪುರುಷೋತ್ತಮ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣವಾಗುತ್ತಿದ್ದರೂ ಅದನ್ನು ನಿಯಮಾನುಸಾರ ತಡೆಯುವ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿಲ್ಲ ಹಾಗಾಗಿ ಅಮಾನತು ಆದೇಶ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.