ಬೆಂಗಳೂರು: ಪಹಲ್ಗಾಮ್ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳು ಕೂಡಲೇ ಭಾರತ ತೊರೆಯಲು ಕೇಂದ್ರ ಸರ್ಕಾರ ಖಡಕ್ ಆದೇಶ ಮಾಡಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿರುವ ಪಾಕಿಸ್ತಾನದ ಮೂವರು ಮಕ್ಕಳು ತಮ್ಮ ತಾಯಿಯೊಂದಿಗೆ ತಮ್ಮ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಇದೇ ಜನವರಿಯಲ್ಲಿ ಸಂಬಂಧಿಕರ ಮದುವೆಗೆಂದು ಪಾಕಿಸ್ತಾನದ ಬಲೂಚಿಸ್ತಾನದ 8 ವರ್ಷದ ಬಿಬಿ ಯಾಮಿನಾ,4 ವರ್ಷದ ಮೊಹಮದ್ ಮುದಾಸಿರ್, 3 ವರ್ಷದ ಮೊಹಮದ್ ಯೂಸುಫ್ ಹೆಸರಿನ ಮೂವರು ಮಕ್ಕಳು, ತಮ್ಮ ತಾಯಿ ರಾಂಶ ಜಹಾನ್ ಅವರೊಂದಿಗೆ ಜೂ. 15ರವರೆಗೆ ವೀಸಾ ವಿಸ್ತರಣೆ ಮಾಡಿಕೊಂಡು ಮೈಸೂರಿನಲ್ಲಿ ಉಳಿದಿದ್ದರು. ಆದರೆ, ಪಹಲ್ಗಾಮ್ ಘಟನೆಯ ನಂತರ ಪಾಕಿಸ್ತಾನದವರಿಗೆ ದೇಶ ತೊರೆಯುವಂತೆ ಕೇಂದ್ರ ಸರ್ಕಾರ ಆದೇಶಿಸಿದ್ದರಿಂದ ಅಟಾರಿ ಗಡಿಯ ಮೂಲಕ ಪಾಕ್ ಗೆ ತೆರಳಲು ಅವರು ಹೋಗಿದ್ದರು. ಆದರೆ, ಗಡಿ ಬಂದ್ ಆಗಿದ್ದರಿಂದ ಪುನಃ ಮೈಸೂರಿಗೆ ಬಂದಿದ್ದಾರೆ.