ಸುದ್ದಿ

ವೀಸಾ ವಿಸ್ತರಣೆ ಕೋರಿದ್ದ ಪಾಕಿಸ್ತಾನಿ ಪ್ರಜೆಗಳ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್

Share It

ಬೆಂಗಳೂರು: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಬಳಿಕ ದೇಶದ ನಾಗರಿಕರ ಹಿತಾಸಕ್ತಿ ಕಾಪಾಡುವ ಹಿನ್ನೆಲೆಯಲ್ಲಿ ಪಾಕಿಸ್ತಾನಿ ಪ್ರಜೆಗಳು ದೇಶ ತೊರೆಯುವಂತೆ ಭಾರತ ಸರ್ಕಾರ ನಿರ್ದೇಶಿಸಿದೆ ಹಾಗೂ ಪಾಕಿಸ್ತಾನಿ ಪ್ರಜೆಗಳ ವೀಸಾಗಳನ್ನು ಅಮಾನತುಗೊಳಿಸಿದೆ. ಹೀಗಾಗಿ ರಾಜ್ಯದಲ್ಲಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳ ವೀಸಾ ವಿಸ್ತರಣೆ ಮಾಡಲು ನಿರ್ದೇಶಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು, ವೀಸಾ ವಿಸ್ತರಣೆ ಕೋರಿದ್ದ ಪಾಕಿಸ್ತಾನಿ ಪ್ರಜೆಗಳ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಭಾರತೀಯ ತಾಯಿ ಮತ್ತು ಪಾಕಿಸ್ತಾನಿ ತಂದೆಗೆ ಜನಿಸಿರುವ ಮತ್ತು ಪಾಕಿಸ್ತಾನಿ ಪ್ರಜೆಗಳಾಗಿರುವ ಮೂವರು ಮಕ್ಕಳು ತಮ್ಮ ತಾಯಿಯ ಮೂಲಕ ವೀಸಾ ವಿಸ್ತರಣೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ ಈ ತೀರ್ಪು ನೀಡಿದೆ. ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಕೇಂದ್ರ ಸರ್ಕಾರ ದೇಶದ ಭದ್ರತೆಯ ಕಾರಣಕ್ಕಾಗಿ ಹಾಗೂ ತನ್ನ ನಾಗರಿಕರ ಹಿತಾಸಕ್ತಿ ಕಾಪಾಡಲು ಪ್ರಜ್ಞಾಪೂರ್ವಕ ನಿರ್ಧಾರ ಕೈಗೊಂಡಿದೆ. ಅಂತಹ ಸಂದರ್ಭಗಳಲ್ಲಿ ಅರ್ಜಿದಾರರ ಪರವಾಗಿ ಆದೇಶ ನೀಡಲು ಯಾವುದೇ ಸೂಕ್ತ ಕಾರಣ ಸಿಗುತ್ತಿಲ್ಲ. ಆದ್ದರಿಂದ ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ ಎಂದು ಹೇಳಿದೆ.

ಪ್ರಕರಣದ ವಿಚಾರಣೆ ವೇಳೆ ಕೇಂದ್ರದ ಪರ ಹಾಜರಿದ್ದ ಡೆಪ್ಯೂಟಿ ಸಾಲಿಸಿಟರ್‌ ಜನರಲ್‌ ವಾದ ಮಂಡಿಸಿ, ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನಿ ಪ್ರಜೆಗಳ ವೀಸಾ ರದ್ದುಗೊಳಿಸಿದೆ. ಕೇಂದ್ರ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಪಾಕಿಸ್ತಾನಿ ಪ್ರಜೆಗಳು ಭಾರತ ತೊರೆಯುವಂತೆ ತಿಳಿಸಲಾಗಿದೆ. ಹೀಗಾಗಿ ಅರ್ಜಿದಾರರಿಗೆ ಯಾವುದೇ ಪರಿಹಾರ ನೀಡಲಾಗುವುದಿಲ್ಲ ಎಂದು ತಿಳಿಸಿದರು.

ಅರ್ಜಿದಾರರ ವಾದವೇನಿತ್ತು: ಅರ್ಜಿದಾರರ ತಾಯಿ ರಂಶಾ ಜಹಾನ್ ಅವರು 2015ರಲ್ಲಿ ಪಾಕಿಸ್ತಾನದಲ್ಲಿ ವಿವಾಹವಾಗಿದ್ದಾರೆ. ಈವರೆಗೂ ಪಾಕಿಸ್ತಾನದ ಪೌರತ್ವಕ್ಕೆ ಅರ್ಜಿ ಸಲ್ಲಿಸಿಲ್ಲ. ಬದಲಿಗೆ ಈಗಲೂ ಭಾರತದ ಪೌರತ್ವ ಹೊಂದಿದ್ದಾರೆ. 2025ರ ಜನವರಿ 4ರಂದು ತಮ್ಮ ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ತಾಯಿಯೊಂದಿಗೆ ವೀಸಾ ಪಡೆದು ಮೈಸೂರಿಗೆ ಆಗಮಿಸಿದ್ದಾರೆ.

ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ನಡೆದ ಬಳಿಕ ಭಾರತ ಸರ್ಕಾರ ಏಪ್ರಿಲ್ 30ರೊಳಗೆ ದೇಶ ತೊರೆಯುವಂತೆ ಸೂಚಿಸಿ ವಿಸಾಗಳನ್ನು ಅಮಾನತು ಮಾಡಿದೆ. ಈ ಹಿನ್ನೆಲೆಯಲ್ಲಿ ತಾವು ಭಾರತದಿಂದ ಪಾಕಿಸ್ತಾನಕ್ಕೆ ವಾಪಸ್ಸಾಗಲು ಅಟ್ಟಾರಿ ಗಡಿಗೆ ಹೋಗಿದ್ದೆವು. ಆದರೆ ಪಾಕಿಸ್ತಾನದ ಗಡಿಗಳನ್ನು ಮುಚ್ಚಿದ್ದರಿಂದ ವಲಸೆ ಅಧಿಕಾರಿಗಳು ನಮ್ಮನ್ನು ಮೈಸೂರಿಗೆ ಹಿಂತಿರುಗಿ ಕಳುಹಿಸಿಕೊಟ್ಟರು. ಹೀಗಾಗಿ ತಮ್ಮ ವೀಸಾಗಳನ್ನು ವಿಸ್ತರಿಸಲು ನಿರ್ದೇಶಿಸಬೇಕು ಹಾಗೂ ತಮ್ಮ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಹೈಕೋರ್ಟ್ ಮೊರೆಹೋಗಿದ್ದರು.


Share It

You cannot copy content of this page