ಬೆಂಗಳೂರು: ಭಾರತ – ಪಾಕಿಸ್ತಾನ ಘರ್ಷಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ದೇಶದ ಮುಂದೆ ಯುದ್ಧದ ಪರಿಸ್ಥಿತಿ ಬರಬಹುದು. ಹೀಗಾಗಿ, ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಕೆಲವು ಸಲಹೆಗಳನ್ನು ನೀಡಿದೆ. ಅದರಂತೆ ರಾಜ್ಯದಲ್ಲಿಯೂ ಕ್ರಮಗಳನ್ನು ತೆಗೆದುಕೊಂಡಿದ್ದೇವೆ’ ಎಂದು ಗೃಹ ಸಚಿವ ಜಿ.
ಪರಮೇಶ್ವರ ತಿಳಿಸಿದರು.
ಈ ಸಂಬಂಧ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ಅಗತ್ಯ ವಸ್ತುಗಳನ್ನು ಹೇಗೆ ನಿರ್ವಹಿಸಬೇಕು? ಏನು ತಯಾರಿ ಮಾಡಿಕೊಳ್ಳಬೇಕು? ಎಂಬ ಬಗ್ಗೆ ಚರ್ಚಿಸಲು ಗೃಹ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಭೆಯನ್ನು ಮುಖ್ಯಮಂತ್ರಿ ಇಂದು ಸಂಜೆ ಕರೆದಿದ್ದಾರೆ’ ಎಂದರು.
ಕೇಂದ್ರ ನೀಡಿದ ಸೂಚನೆಯಂತೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಲ್ಲಿ ಪರಿಸ್ಥಿತಿ ಹೇಗೆ ಬರುತ್ತದೆಯೆಂದು ಗೊತ್ತಿಲ್ಲ. ಹಾಗಾಗಿ ಪೊಲೀಸರಿಗೆ ರಜೆ ನೀಡುವುದಿಲ್ಲ ಎಂದರು.
ಕಾನೂನು ಸುವ್ಯವಸ್ಥೆಗಿಂತ ಹೆಚ್ಚಾಗಿ ಇಡೀ ದೇಶದಲ್ಲಿ ಈಗ ಯುದ್ಧದ ಭೀತಿ ಇದೆ. ಸೂಕ್ಷ್ಮ ಸನ್ನಿವೇಶ ಯಾವಾಗ ಸಾಮಾನ್ಯ ಸ್ಥಿತಿಗೆ ಬರಬಹುದೆಂದು ಗೊತ್ತಿಲ್ಲ. ಅದನ್ನು ಕೇಂದ್ರ ಸರ್ಕಾರ ಹೇಳಲಿದೆ. ಅಲ್ಲಿಯವರೆಗೆ ನಾವು ಸಿದ್ಧವಾಗಿರಬೇಕು. ಮಂಗಳೂರು, ಉತ್ತರ ಕನ್ನಡದಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದರು.