ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಅಳವಡಿಸಿಕೊಳ್ಳುವಂತೆ ಯಾವುದೇ ರಾಜ್ಯವನ್ನು ತಾನು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಸುಪ್ರೀಂಕೋಟ್೯ ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕೇರಳಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ)ಯ ಅನುಷ್ಠಾನವನ್ನು ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದಿಂದ ಮೂಲಭೂತ ಹಕ್ಕುಗಳ ಉಲ್ಲಂಘನೆಯನ್ನು ಮಾತ್ರ ನ್ಯಾಯಾಲಯವು ಪರಿಗಣಿಸಬಹುದಾಗಿದೆ ಎಂದು ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಆರ್.ಮಹಾದೇವನ್ ಅವರ ಪೀಠವು ತಿಳಿಸಿತು.
ತಮಿಳುನಾಡು,ಪ.ಬಂಗಾಳ ಮತ್ತು ಕೇರಳ ಎನ್ಇಪಿಯನ್ನು ಜಾರಿಗೊಳಿಸಲು ಸಾಂವಿಧಾನಿಕವಾಗಿ ಬದ್ಧವಾಗಿವೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಿದ್ದ ವಕೀಲ ಜಿ.ಎಸ್.ಮಣಿ ಅವರು, ತ್ರಿಭಾಷಾ ಸೂತ್ರ ಮತ್ತು ವಿದ್ಯಾರ್ಥಿಗಳು ಕಡ್ಡಾಯವಾಗಿ ಹಿಂದಿಯನ್ನು ಕಲಿಯಬೇಕಾಗುತ್ತದೆ ಎಂಬ ಕಾರಣಗಳಿಂದಾಗಿ ಎನ್ಇಪಿಯನ್ನು ವಿರೋಧಿಸಲಾಗುತ್ತಿದೆ.
ಎನ್ಇಪಿ ಅನುಷ್ಠಾನಕ್ಕೆ ಆಕ್ಷೇಪಗಳನ್ನು ಪ್ರಶ್ನಿಸಿದ್ದ ಮಣಿಯವರ ಅರ್ಜಿಯು,ರಾಜ್ಯಗಳು ಅನಗತ್ಯವಾಗಿ ಎನ್ಇಪಿಯನ್ನು ರಾಜಕೀಯ ವಿಷಯವನ್ನಾಗಿ ಮಾಡುತ್ತಿವೆ ಎಂದು ಪ್ರತಿಪಾದಿಸಿತ್ತು. ಶಿಕ್ಷಣದಲ್ಲಿ ಏಕರೂಪತೆಯನ್ನು ತರಲು ಮಾತ್ರ ಎನ್ಇಪಿ ಬಯಸಿದೆ ಎಂದು ಹೇಳಿದ್ದ ಅರ್ಜಿಯು,ಸಮಾಜದ ಎಲ್ಲ ಸ್ತರಗಳ ಶಾಲಾ ಮಕ್ಕಳಿಗೆ ಎಲ್ಲ ಭಾರತೀಯ ಭಾಷೆಗಳನ್ನು ಉಚಿತವಾಗಿ ಕಲಿಸಬೇಕು ಎಂದು ಹೇಳಿತ್ತು.
ಸಂವಿಧಾನದ,ವಿಶೇಷವಾಗಿ ಉಚಿತ ಮತ್ತು ಗುಣಮಟ್ಟದ ಶಿಕ್ಷಣವನ್ನು ಪಡೆಯುವ ಮಕ್ಕಳ ಹಕ್ಕಿನ ಪರಿಣಾಮಕಾರಿ ಅನುಷ್ಠಾನಕ್ಕಾಗಿ ನಿರ್ದೇಶನಗಳನ್ನು ಹೊರಡಿಸುವಂತೆ ಅರ್ಜಿಯಲ್ಲಿ ಕೋರಿದ್ದ ಮಣಿ, ಎನ್ಇಪಿಯು ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಪ್ರಮುಖ ಶಿಕ್ಷಣ ನೀತಿಯಾಗಿದೆ. ಉಚಿತ ಶಿಕ್ಷಣವು ಮೂಲಭೂತ ಹಕ್ಕು ಆಗಿದೆ. ಈ ನೀತಿಯನ್ನು ಸ್ವೀಕರಿಸಲು ನಿರಾಕರಿಸುವ ಮೂಲಕ ರಾಜ್ಯ ಸರಕಾರವು ಶಾಲಾ ಮಕ್ಕಳಿಗೆ ಉಚಿತ ಶಿಕ್ಷಣದ ಮೂಲಭೂತ ಹಕ್ಕನ್ನು ನಿರಾಕರಿಸುತ್ತಿದೆ ಎಂದು ವಾದಿಸಿದ್ದರು.