ಕೊಯಮತ್ತೂರು: ತಮಿಳುನಾಡನ್ನು ಬೆಚ್ಚಿ ಬೀಳಿಸಿದ್ದ ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಮತ್ತು ಸುಲಿಗೆ ಪ್ರಕರಣದ ಎಲ್ಲಾ 9 ದೋಷಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತಮಿಳುನಾಡಿನ ಮಹಿಳಾ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
6 ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ನಡೆದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಆರ್ .ನಂದಿನಿ ಅವರು ಶಿಕ್ಷೆಯ ಆದೇಶ ಪ್ರಕಟಿಸಿದರು. ಎಲ್ಲ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯ ಜೊತೆಗೆ, ಎಂಟು ಸಂತ್ರಸ್ತರಿಗೆ 85 ಲಕ್ಷ ರೂಪಾಯಿ ಪರಿಹಾರ ನೀಡುವಂತೆಯೂ ಆದೇಶಿಸಿದ್ದಾರೆ.
ಅಪರಾಧಿಗಳಾದ ಕೆ. ತಿರುನಾವುಕ್ಕರಸು, ಎನ್ ರಿಶ್ವಂತ್ ಆಲಿಯಾಸ್ ಶಬರಿರಾಜನ್, ಎಂ. ಸತೀಶ್, ಟಿ.ವಸಂತಕುಮಾರ್, ಆರ್. ಮಣಿವಣ್ಣನ್, ಹರೋನ್ ಪಾಲ್, ಪಿ.ಬಾಬು, ಆಲಿಯಾಸ್ ಬೈಕ್ ಬಾಬು, ಕೆ.ಅರುಳಾನಂದಂ, ಎಂ ಅರುಣ್ ಕುಮಾರ್ಗೆ ಜೀವಾವಧಿ ಜೈಲು ಶಿಕ್ಷೆ ನೀಡಲಾಗಿದೆ.
ಏನಿದು ಪ್ರಕರಣ?: 2016- 2018ರ ನಡುವೆ ಪೊಲ್ಲಾಚಿಯಲ್ಲಿ ಗುಂಪೊಂದು ಲೈಂಗಿಕ ದೌರ್ಜನ್ಯ ಮತ್ತು ಸುಲಿಗೆ ದಂಧೆಯನ್ನು ನಡೆಸುತ್ತಿತ್ತು. ಮಹಿಳೆಯರು ಅದರಲ್ಲಿಯೂ ಕಾಲೇಜು ವಿದ್ಯಾರ್ಥಿನಿಯರನ್ನು ಸುಳ್ಳು ಕಾರಣಗಳನ್ನು ನೀಡಿ ಏಕಾಂತದ ಸ್ಥಳಗಳಿಗೆ ಕರೆದೊಯ್ಯುತ್ತಿದ್ದರು. ಅಲ್ಲಿ ಲೈಂಗಿಕವಾಗಿ ಬಳಸಿಕೊಂಡು ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದರು. ಮಾತ್ರವಲ್ಲದೇ ಸಂತ್ರಸ್ತೆ ವಿರೋಧಿಸಿದರೆ ವಿಡಿಯೋ ಮುಂದಿಟ್ಟುಕೊಂಡು ಬೆದರಿಕೆ ಹಾಕುತ್ತಿದ್ದರು ಜೊತೆಗೆ ಹೆದರಿಸಿ ಸಂತ್ರಸ್ತೆಯರ ಬಳಿ ಬೆಲೆಬಾಳುವ ವಸ್ತುಗಳನ್ನು ಸುಲಿಗೆ ಮಾಡುತ್ತಿದ್ದರು.