ನವದೆಹಲಿ: ಕೌಟುಂಬಿಕ ವಿಚಾರಗಳಿಗೆ ಸಂಬಂಧಿಸಿದಂತೆ ಮಹಿಳೆಯರ ರಕ್ಷಣೆಗಾಗಿ ರೂಪಿಸಿರುವ ವರದಕ್ಷಿಣೆ ನಿಷೇಧ ಕಾಯ್ದೆಗಳು ದುರುದ್ದೇಶಕ್ಕೆ ದುರ್ಬಳಕೆಯಾಗುತ್ತಿರುವುದು ತೀವ್ರ ನೋವು ತಂದಿದೆ ಎಂದು ಸುಪ್ರೀಂಕೋರ್ಟ್ ಆತಂಕ ವ್ಯಕ್ತಪಡಿಸಿದೆ.
ಮದುವೆ ನಂತರ ಪ್ರತ್ಯೇಕವಾಗಿಯೇ ವಾಸ ಮಾಡುತ್ತಿರುವ ಪತಿಯ ತಂದೆ-ತಾಯಿ, ಒಡಹುಟ್ಟಿದವರನ್ನು ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸಿ, ತೊಂದರೆ ನೀಡುವ ದುರುದ್ದೇಶದಿಂದ ವರದಕ್ಷಿಣೆ ನಿಷೇಧ ಕಾಯ್ದೆಗಳ ದುರ್ಬಳಕೆ ಹೆಚ್ಚುತ್ತಿದೆ’ ಎಂದೂ
ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನಾ ಹಾಗೂ ಸತೀಶ್ಚಂದ್ರ ಶರ್ಮಾ ಅವರು ಇದ್ದ ನ್ಯಾಯಪೀಠ, ಮಂಗಳವಾರ ನೀಡಿರುವ ತೀರ್ಪಿನಲ್ಲಿ ಹೇಳಿದೆ.
ದೂರುದಾರ ಪತ್ನಿ ಅಥವಾ ಆಕೆಯ ಕುಟುಂಬಸ್ಥರು ಮಾಡುವ ಆರೋಪಗಳ ಸತ್ಯಾಸತ್ಯತೆಯ ಬಗ್ಗೆಯೇ ಅನುಮಾನ ಮೂಡಿಸುವಂತಿದೆ. ವರದಕ್ಷಿಣೆ ಕಿರುಕುಳದಿಂದ ಮಹಿಳೆಯನ್ನು ರಕ್ಷಿಸುವುದಕ್ಕಾಗಿ ರೂಪಿಸಿರುವ ಕಾಯ್ದೆಯ ಉದ್ದೇಶವನ್ನೇ ಇಂತಹ ಪ್ರವೃತ್ತಿ ದುರ್ಬಲಗೊಳಿಸುತ್ತಿದೆ’ ಎಂದು ನ್ಯಾಯಪೀಠ ಹೇಳಿದೆ.
ವಿಚಾರಣಾ ನ್ಯಾಯಾಲಯ ತಮಗೆ ಶಿಕ್ಷೆ ನೀಡಿರುವುದನ್ನು ಎತ್ತಿ ಹಿಡಿದು ಅಲಹಾಬಾದ್ ಹೈಕೋರ್ಟ್ 2018ರ ನವೆಂಬರ್ 14ರಂದು ನೀಡಿದ್ದ ಆದೇಶ ಪ್ರಶ್ನಿಸಿ ಲಖನೌದ ರಾಜೇಶ್ ಛಡ್ಡಾ ಸುಪ್ರೀಂಕೋಟ್೯ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ದೂರುದಾರ ಮಹಿಳೆ ಮತ್ತು ಆಕೆಯ ತಂದೆ ನೀಡಿದ ಹೇಳಿಕೆಗಳನ್ನು ಹೊರತುಪಡಿಸಿದಂತೆ, ಪತಿ ವಿರುದ್ಧ ಮಾಡಿರುವ ಆರೋಪಗಳನ್ನು ಸಾಬೀತುಪಡಿಸುವಂತೆ ಯಾವುದೇ ಸಾಕ್ಷ್ಯಗಳನ್ನು ದೂರುದಾರ ಮಹಿಳೆ ಒದಗಿಸಿಲ್ಲ ಎಂದು ಪೀಠ ಹೇಳಿದೆ.
ಪತಿ ರಾಜೇಶ್ ಛಡ್ಡಾ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ ನಂತರ, ಪ್ರತಿವಾದಿ ವಿರುದ್ಧ 1999ರ ಫೆಬ್ರುವರಿ 6ರಂದು ಎಫ್ಐಆರ್ ದಾಖಲಿಸಲಾಗಿದೆ. ಪತಿಯೊಂದಿಗೆ ದೂರದಾರ ಮಹಿಳೆ ಒಂದು ವರ್ಷ ಮಾತ್ರ ಒಟ್ಟಿಗೆ ಜೀವಿಸಿದ್ದಾರೆ. ಹೀಗಾಗಿ, ಪತಿ ವಿರುದ್ಧ ದಾಖಲಿಸಿರುವ ಎಫ್ಐಆರ್ ದುರುದ್ದೇಶಪೂರಿತ ಎಂಬುದು ಕಂಡುಬರುತ್ತದೆ.
ಪತಿ ತಪ್ಪಿತಸ್ಥ ಎಂದು ತೋರಿಸುವ ಯಾವುದೇ ಸಾಕ್ಷ್ಯಗಳು ಕಂಡುಬಂದಿಲ್ಲ. ಆದರೆ, ಅವರ ವಿರುದ್ಧ ದಾಖಲಾಗಿರುವ ಎಫ್ಐಆರ್ ಹಾಗೂ ಅದರ ಆಧಾರದಲ್ಲಿ ನಡೆಯುತ್ತಿರುವ ವಿಚಾರಣೆ ಸಮರ್ಥನೀಯವೇ ಎಂಬುದನ್ನು ಪರಿಷ್ಕರಿಸುವ ವಿವೇಚನಾ ಅಧಿಕಾರ ಹೈಕೋರ್ಟ್ ಹೊಂದಿದೆ. ಹೀಗಾಗಿ ಮೇಲ್ಮನವಿದಾರನ ವಿರುದ್ಧ ಕೈಗೊಳ್ಳುವ ಯಾವುದೇ ವಿಚಾರಣೆಯು ಕಾನೂನಿನ ದುರ್ಬಳಕೆಗೆ ಸಮವಾಗುತ್ತದೆ ಎಂದ ಪೀಠ ಹೇಳಿದೆ.