ಬೆಂಗಳೂರು: ಪೋಷಕರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದ ಮಾತ್ರಕ್ಕೆ ಅವರು ಮಕ್ಕಳ ಮೇಲೆ ಅವಲಂಬಿತರಾಗಿಲ್ಲ ಎಂದು ಘೋಷಣೆ ಮಾಡಲಾಗದು ಎಂದು ಹೇಳಿರುವ ಹೈಕೋರ್ಟ್, ಅಪಘಾತದಲ್ಲಿ ಮೃತಪಟ್ಟ ಪುತ್ರನ ವಿಮಾ ಪರಿಹಾರದಲ್ಲಿ ಪೋಷಕರಿಗೂ ಹಕ್ಕಿದೆ ಎಂದು ಆದೇಶಿಸಿದೆ.
ಕೋಲಾರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಮೃತ ನಾರಾಯಣಸ್ವಾಮಿ, 2009ರಲ್ಲಿ ತಮಿಳುನಾಡಿನ ಗುಡಲೂರು ಮುಖ್ಯರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತರಾಗಿದ್ದರು. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ಎಂಎಸಿ 2014ರ ನವೆಂಬರ್ನಲ್ಲಿ ಕುಟುಂಬದ ಸದಸ್ಯರಿಗೆ 18,93,308 ರೂ.ಪರಿಹಾರವನ್ನು ಶೇ.6ರ ಬಡ್ಡಿ ಸಹಿತ ಮೃತನ ಪತ್ನಿ ಮತ್ತು ಮಕ್ಕಳು ಹಾಗೂ ಪೋಷಕರಿಗೆ ಪಾವತಿಸಲು ಆದೇಶಿಸಿತ್ತು.
ಅಪಘಾತದಲ್ಲಿ ಮೃತಪಟ್ಟ ಮಗನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಪೋಷಕರಿಗೆ ಪರಿಹಾರ ಘೋಷಣೆ ಮಾಡಿದ್ದ ಕೋಲಾರ ವಾಹನಗಳ ಅಪಘಾತ ನ್ಯಾಯಾಧೀಕರಣ(ಎಂಎಸಿಟಿ) ಆದೇಶ ಪ್ರಶ್ನಿಸಿ ಬಜಾಜ್ ಅಲೆಯನ್ಸ್ ಜನರಲ್ ಇನ್ಸೂರೆನ್ ವಿಮಾ ಕಂಪೆನಿ ಮತ್ತು ಪರಿಹಾರ ಹೆಚ್ಚಳ ಕೋರಿ ಮೃತರ ವಾರಸುದಾರರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ನ್ಯಾ. ಕೆ.ಎಸ್.ಮುದಗಲ್ ಮತ್ತು ನ್ಯಾ. ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠ ಮೇಲ್ಮನವಿ ವಜಾಗೊಳಿಸಿದೆ ಅಲ್ಲದೆ, ಕೋಲಾರ ಎಂಎನಿಸಿ ಆದೇಶವನ್ನು ಊರ್ಜಿತಗೊಳಿಸಿದೆ.
“ಸಾವಿನ ನಂತರದ ಪರಿಹಾರ ಮೊತ್ತದಲ್ಲಿ ಪೋಷಕರು ಪಾಲು ಪಡೆಯುವ ಹಕ್ಕಿದೆ.” ಎಂದಿರುವ ನ್ಯಾಯಾಲಯ, ”ಅಪಘಾತದ ಪರಿಹಾರ ಮೊತ್ತವನ್ನು 23 ಲಕ್ಷ ರೂಪಾಯಿಗಳಿಗೆ ಹೆಚ್ಚಳ ಮಾಡಿದ್ದು, ಅದರಲ್ಲಿ ಶೇ. 50ರಷ್ಟು ಪತ್ನಿಗೆ, ಶೇ. 30ರಷ್ಟು ಮಕ್ಕಳಿಗೆ ಮತ್ತು ಶೇ. 20ರಷ್ಟು ಪೋಷಕರಿಗೆ ನೀಡಬೇಕು,” ಎಂದು ವಿಮಾ ಕಂಪನಿಗೆ ನ್ಯಾಯಾಲಯ ಆದೇಶಿಸಿದೆ.