ಸುದ್ದಿ

ಎಫ್ಐಆರ್ ದಾಖಲಿಸಲು ನಿರಾಕರಿಸಿದ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ₹2ಲಕ್ಷ ದಂಡ; ತೀರ್ಪು ಎತ್ತಿಹಿಡಿದ ಸುಪ್ರೀಂಕೋರ್ಟ್

Share It

ನವದೆಹಲಿ: ದೂರು ನೀಡಲು ಪೊಲೀಸ್ ಠಾಣೆಗೆ ಬರುವ ನಾಗರಿಕನನ್ನು ಅಪರಾಧಿಯಂತೆ ನಡೆಸಿಕೊಳ್ಳಬಾರದು’ ಎಂದು ಹೇಳಿರುವ ಸುಪ್ರೀಂಕೋರ್ಟ್ ದೂರುದಾರರೊಂದಿಗೆ ಅಸಭ್ಯ ಭಾಷೆ ಬಳಸಿದ್ದಕ್ಕಾಗಿ ಪೊಲೀಸ್ ಇನ್ಸ್‌ಪೆಕ್ಟರ್‌ವೊಬ್ಬರಿಗೆ ₹2ಲಕ್ಷ ರೂ. ಪರಿಹಾರ ಪಾವತಿಸುವಂತೆ ನೀಡಿರುವ ದಂಡದ ಶಿಕ್ಷೆಯನ್ನು ಎತ್ತಿಹಿಡಿದಿದೆ.

‘ಪೊಲೀಸ್ ಠಾಣೆಗೆ ದೂರು ನೀಡಲು ಬರುವ ಯಾವುದೇ ವ್ಯಕ್ತಿಯನ್ನು ಅಪರಾಧಿಯಂತೆ ನಡೆಸಿಕೊಳ್ಳಬಾರದು. ಅವರನ್ನು ಘನತೆಯಿಂದ ನಡೆಸಿಕೊಳ್ಳಬೇಕು. ಇದು ಸಂವಿಧಾನದ 21ನೇ ವಿಧಿಯು ನೀಡಿರುವ ಅವರ ಮೂಲಭೂತ ಹಕ್ಕು ಕೂಡ ಎಂದು ಹೇಳಿದೆ.

ಅಸಭ್ಯ ಭಾಷೆ ಬಳಸಿದ್ದಕ್ಕಾಗಿ ₹2 ಲಕ್ಷ ಪರಿಹಾರ ಪಾವತಿಸುವಂತೆ ಪೊಲೀಸ್ ಇನ್ಸ್‌ಪೆಕ್ಟರ್‌ವೊಬ್ಬರಿಗೆ ವಿಧಿಸಿರುವ ದಂಡದ ಶಿಕ್ಷೆಯನ್ನು ಎತ್ತಿಹಿಡಿದ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಉಜ್ವಲ್ ಭುಯಾನ್ ಅವರನ್ನೊಳಗೊಂಡ ಪೀಠವು, ‘ಈ ಪ್ರಕರಣದಲ್ಲಿನ ಅಂಶಗಳು ಅತ್ಯಂತ ಆಘಾತಕಾರಿಯಾಗಿವೆ’ ಎಂದು ಹೇಳಿದೆ.

ತಮಿಳುನಾಡಿನ ವಿರ್ತುನಗರ ಜಿಲ್ಲೆಯ ಶ್ರೀವಿಲ್ಲಿಪುತ್ತೂರ್ ಟೌನ್ ಪೊಲೀಸ್ ಠಾಣೆಯ ಕ್ರೈಮ್ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟ‌ರ್ ಆಗಿ ನೇಮಕಗೊಂಡಿದ್ದ ಮೇಲ್ಮನವಿದಾರ ಪಾವುಲ್‌ ಯೇಸುದಾಸನ್, ಎಫ್‌ಐಆರ್ ದಾಖಲಿಸಲು ನಿರಾಕರಿಸಿದ್ದು ಮಾತ್ರವಲ್ಲ, ದೂರುದಾರರ ತಾಯಿಯೊಂದಿಗೆ ಮಾತನಾಡುವಾಗ ಬಹಳ ಆಕ್ಷೇಪಾರ್ಹ ಮತ್ತು ನಿಂದನೀಯ ಭಾಷೆಯನ್ನು ಬಳಸಿದ್ದಾರೆ’ ಎಂದು ನ್ಯಾಯಪೀಠ ಹೇಳಿದೆ.

ದೂರು ನೀಡಲು ಠಾಣೆಗೆ ಬರುವ ಯಾವುದೇ ವ್ಯಕ್ತಿಯನ್ನು ಗೌರವದಿಂದ ನಡೆಸಿಕೊಳ್ಳಬೇಕು. ಅಪರಾಧಿಯಂತೆ ಪರಿಗಣಿಸಬಾರದು. ಇದು ಸಂವಿಧಾನ ನಾಗರಿಕರಿಗೆ ನೀಡಿರುವ ಮೂಲಭೂತ ಹಕ್ಕಾಗಿದೆ. ಎಂದು ಹೇಳಿರುವ ನ್ಯಾಯಪೀಠ ಮೇಲ್ಮನವಿದಾರರ ಅರ್ಜಿಯನ್ನು ವಜಾಗೊಳಿಸಿದೆ.


Share It

You cannot copy content of this page