ಸುದ್ದಿ

ಪ್ರತೀಕಾರ ತಿರಿಸಿಕೊಳ್ಳಲು ಕ್ರಿಮಿನಲ್ ಕಾನೂನು ಅಸ್ತ್ರವಾಗಬಾರದು: ಹೈಕೋರ್ಟ್

Share It

ಬೆಂಗಳೂರು: ಸಿವಿಲ್ ಪ್ರಕರಣಗಳಲ್ಲಿ ಕ್ರಿಮಿನಲ್ ಕಾನೂನನ್ನು ಅಸ್ತ್ರವಾಗಿ ಬಳಸುವವರ ವಿರುದ್ಧ ನ್ಯಾಯಾಲಯಗಳು ಜಾಗರೂಕರಾಗಿರಬೇಕು ಎಂದು ಪ್ರಕರಣವೊಂದರ ವಿಚಾರಣೆಯಲ್ಲಿ ಹೈಕೋರ್ಟ್ ಹೇಳಿದೆ.

ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದ ವ್ಯಾಜ್ಯ ಕುರಿತು ಮಹಾರಾಷ್ಟ್ರ ಮೂಲದ ಬಿಲ್ಡರ್ ಲಾಸ್ ಭೋರ್ಮೆಲ್ಲಿ ಓಸ್ವಾಲ್ ವಿರುದ್ಧ ಆತನ ಪಾಲುದಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ದಾಖಲಿಸಿದ್ದ ಪ್ರಕರಣ ರದ್ದುಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದೆ.

ತನ್ನ ವಿರುದ್ಧದ ಪ್ರಕರಣ ರದ್ದುಪಡಿಸಲು ಕೋರಿ ಭೋರ್ಮೇಲ್ಲಿ ಓಸ್ವಾಲ್ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಪೀಠ, ಪ್ರಕರಣದಲ್ಲಿ ಅರ್ಜಿದಾರ ಮತ್ತು ದೂರುದಾರ ಒಂದೇ ಕಂಪನಿಯ ಪಾಲುದಾರರಾಗಿದ್ದಾರೆ. ಅವರ ನಡುವೆ ಉಂಟಾದ ಆರ್ಥಿಕ ವಿವಾದಕ್ಕೆ ಪ್ರತಿಯಾಗಿ ಸೇಡು ತಿರಿಸಿಕೊಳ್ಳಲು ಕ್ರಿಮಿನಲ್ ನ್ಯಾಯ ವ್ಯವಸ್ಥೆ ಬಳಸಿಕೊಂಡಿದ್ದಾರೆ. ಇದು ಪ್ರತೀಕಾರದ ಅಸ್ತ್ರ ಎಂದು ಆದೇಶದಲ್ಲಿ ನ್ಯಾಯಪೀಠ ಹೇಳಿದೆ.

ಪ್ರಕರಣದಲ್ಲಿ ನನ್ನ ಬಳಿ ನಿಮ್ಮ ಜಾತಿವಾದಿ ಮನಸ್ಥಿತಿ ತೋರಿಸಬೇಡಿ ಎಂದು ಅರ್ಜಿದಾರರು ತಮ್ಮನ್ನು ಉದ್ದೇ ಶಿಸಿ ಹೇಳಿದ್ದಾರೆ ಎಂದು ದೂರುದಾರ ಸೋಮಶೇಖ‌ರ್ ಆರೋಪಿಸಿದ್ದಾರೆ. ಆದರೆ, ಅದು ಜಾತಿ ಹೆಸರನ್ನು ಹೇಳಿ ನಿಂದನೆ ಮಾಡಿದ್ದಾರೆ ಎಂದು ವ್ಯಾಖ್ಯಾನಿ ಸಲಾಗುವುದಿಲ್ಲ. ಆದ್ದರಿಂದ ಈ ಕೇಸ್‌ನ ವಿಚಾರಣೆ ಮುಂದುವರೆಸಿದಲ್ಲಿ ಕಾನೂನು ವ್ಯವಸ್ಥೆಯ ದುರು ಪಯೋಗವಾಗಲಿದೆ. ಸಿವಿಲ್ ವ್ಯಾಜ್ಯಗಳಲ್ಲಿ ಕ್ರಿಮಿನಲ್ ಕಾನೂನನ್ನು ಅಸ್ತ್ರವಾಗಿ ಬಳಸುವ ವಿರುದ್ಧ ನ್ಯಾಯಾಲಯಗಳು ಎಚ್ಚರಿಕೆಯಿಂದ ಇರಬೇಕು ಎಂದು ನ್ಯಾಯಪೀಠ ಹೇಳಿದೆ.

ಏನಿದು ಪ್ರಕರಣ: ಬೆಂಗಳೂರಿನ ಸೋಮಶೇಖ‌ರ್, ಅರ್ಜಿದಾರ ವಿಲಾಸ್ ಭೋರ್ಮೆಲ್ಲಿ ಓಸ್ವಾಲ್‌ರೊಂದಿಗೆ 2011 ರಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆ ಗ್ರೀನ್ ಲ್ಯಾಂಡ್ ಇನ್ಮಾ ಎಂಬ ಸಂಸ್ಥೆಯ ವ್ಯವಹಾರದಲ್ಲಿ ಪಾಲುದಾರರಾಗಿದ್ದರು. 2016ರಲ್ಲಿ ಇಬ್ಬರ ನಡುವೆ ಉಂಟಾದ ಮನಸ್ತಾಪದಿಂದ ವ್ಯವಹಾರ ಸಂಬಂಧ ಸ್ಥಗಿತಗೊಳಿಸಿದ್ದರು. ಆದರೆ, ವ್ಯವಹಾರದಲ್ಲಿನ ಗೊಂದಲಗಳು ಮುಂದುವರೆದಿದ್ದವು. ಈ ಸಂಬಂಧ
ಪರಿಶಿಷ್ಟ ಜಾತಿಗೆ ಸೇರಿದ ಸೋಮ ಶೇಖರ್ 2021ರಲ್ಲಿ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ (ಡಿಸಿಆರ್‌ಇ) ದೂರು ಸಲ್ಲಿಸಿದ್ದರು.


Share It

You cannot copy content of this page