ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ
ಮೇಲ್ನೋಟಕ್ಕೆ ಆರೋಪಗಳನ್ನು ಸಾಬೀತು ಪಡಿಸುವಂತಹ ಸಾಕ್ಷ್ಯಗಳಿಲ್ಲದೆ ದೂರು ದಾಖ ಲಿಸುವಂತಿಲ್ಲ. ಒಂದು ವೇಳೆ ದೂರು ದಾಖಲಿಸಿದರೆ ಅದು ಸಂವಿಧಾನದ 21ನೇ ವಿಧಿಯನ್ವಯ ವ್ಯಕ್ತಿಯ ಜೀವನ, ಘನತೆ ಹಾಗೂ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.
ತಮ್ಮ ವಿರುದ್ಧ ದಾಖಲಾದ ವಂಚನೆ ಪ್ರಕರಣ ರದ್ದು ಕೋರಿ ವಿಪುಲ್ ಪ್ರಕಾಶ್ ಪಾಟೀಲ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ್ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಅರ್ಜಿ ಪುರಸ್ಕರಿಸಿರುವ ನ್ಯಾಯಪೀಠ, ಅರ್ಜಿದಾರರ ವಿರುದ್ದದ ಹಣಕಾಸು ಸಂಸ್ಥೆಗಳಲ್ಲಿನ ಕರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯಿದೆ ಸೆಕ್ಷನ್ ಹಾಗೂ ಐಪಿಸಿ 420 ಮತ್ತು 406 ರನ್ವಯ ಹೂಡಿದ್ದ ಎಫ್ಐಆರ್ ರದ್ದುಗೊಳಿಸಿ ಮಹತ್ವದ ಆದೇಶ ನೀಡಿದೆ.
ಈ ಪ್ರಕರಣದಲ್ಲಿ ಅರ್ಜಿದಾರರ ಹೆಸರನ್ನು ದೂರುದಾರರು ವಿನಾಕಾರಣ ಪ್ರಸ್ತಾಪಿಸಿದ್ದಾರೆ. ಘಟನೆಗೂ ಅರ್ಜಿದಾರರಿಗೂ ಸಂಬಂಧವಿದೆ ಎಂದು ಕಲ್ಪಿಸಲು ಮುಂದಾಗಿದ್ದಾರೆ. ಆದರೆ, ಮೇಲ್ನೋಟಕ್ಕೆ ಅರ್ಜಿದಾರರ ವಿರುದ್ಧ ಯಾವುದೇ ಸಾಕ್ಷ್ಯವಿಲ್ಲದೆ ಅವರ ವಿರುದ್ಧ ಆರೋಪ ಮುಂದುವರಿಸುವುದು ದುರ್ಬಳಕೆ ಆಗಲಿದೆ ಎಂದು ಪೀಠ ಹೇಳಿದೆ
ಏನಿದು ಪ್ರಕರಣ: ವಿಪುಲ್ ಪ್ರಕಾಶ್ ಪಾಟೀಲ್, ಪಂಕಜ್ ನಾಮ್ ದೇವ್ ಮತ್ತು ಸಂತೋಷ್ ಗಂಗಾರಾಮ್ ಘೋಡ್ಲೆ ಎಂಬುವರು 1ಲಕ್ಷ ರು. ಹಣ ಠೇವಣಿ ಮಾಡಿದರೆ ಅದನ್ನು 10 ತಿಂಗಳಲ್ಲಿ ವಾಪಸ್ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ನಂತರ ಹಣ ಮರುಪಾವತಿ ಮಾಡದೆ ವಂಚನೆ ಎಸಗಿದ್ದಾರೆ ಎಂದು ಶಿವಾನಂದ ಎಂಬುವರು ದೂರು ನೀಡಿದ್ದರು. ಅದನ್ನು ಆಧರಿಸಿ ಚಿಕ್ಕೋಡಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಅದನ್ನು ರದ್ದುಗೊಳಿಸುವಂತೆ ಅರ್ಜಿದಾರರು ಹೈಕೋರ್ಟ್ ಮೆಟ್ಟಲೇರಿದ್ದರು.