ಸುದ್ದಿ

ಬಿಸಿಯೂಟದಲ್ಲಿ ಮೊಟ್ಟೆ ವಿತರಿಸದ 568 ಶಾಲೆಗಳಿಗೆ ನೋಟಿಸ್‌

Share It

ಬೆಂಗಳೂರು: ಮಧ್ಯಾಹ್ನ ಬಿಸಿಯೂಟಕ್ಕೆ ಮಕ್ಕಳಿಗೆ ಮೊಟ್ಟೆ ನೀಡದ ರಾಜ್ಯದಲ್ಲಿನ 568 ಶಾಲೆಗಳ ಮುಖ್ಯಸ್ಥರು, ಎಸ್‌ಡಿಎಂಸಿ ಹಾಗೂ ಮೇಲ್ವಿಚಾರಣಾ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಶಿಕ್ಷಣ ಇಲಾಖೆ ಮುಂದಾಗಿದೆ.

ಮಧ್ಯಾಹ್ನದ ಬಿಸಿಯೂಟ ಯೋಜನೆ ಅಡಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ವಾರದ 6 ದಿನಗಳು ಮೊಟ್ಟೆ ವಿತರಿಸಲಾಗುತ್ತಿದೆ, ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ನೀಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಕೆಲ ಶಾಲೆಗಳಲ್ಲಿ ಅಲ್ಲಿನ ಎಸ್‌ಡಿಎಂಸಿ ಸ್ವಯಂ ನಿರ್ಧಾರ ಕೈಗೊಂಡು ಮೊಟ್ಟೆ ಬದಲು ಬಾಳೆಹಣ್ಣು ವಿತರಿಸುತ್ತಿದ್ದಾರೆ. ಇದು ನಿಯಮಗಳಿಗೆ ವಿರುದ್ಧ ಎಂದು ಪಿಎಂ ಪೋಷಣ್ ಶಕ್ತಿ ನಿರ್ಮಾಣ್ ಘಟಕದ ನಿರ್ದೇಶಕರು ಹೇಳಿದ್ದಾರೆ.

ಮಕ್ಕಳಿಗೆ ತಪ್ಪದೆ ಮೊಟ್ಟೆ ನೀಡುವಂತೆ ಬೇಡಿಕೆ ಸಲ್ಲಿಸಿದ್ದರೂ, ಬಾಳೆ ಹಣ್ಣು ನೀಡುವ ತೀರ್ಮಾನ ತೆಗೆದುಕೊಳ್ಳಬಾರದು. ತಕ್ಷಣವೇ ಇಂತಹ ನಡವಳಿಕೆಗಳನ್ನು ಸರಿಪಡಿಸಿಕೊಳ್ಳಬೇಕು. ಯೋಜನೆಯ ಉದ್ದೇಶ ಹಾಳು ಮಾಡಬಾರದು. ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು ಮತ್ತು ತಂಡ ಶಾಲೆಗಳಿಗೆ ಭೇಟಿ ನೀಡಿ, ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಆದೇಶ ಮಾಡಿದ್ದಾರೆ.


Share It

You cannot copy content of this page