ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿ ನೇಮಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಕವಿವಿ ಕುಲಪತಿಗಳ ನೇಮಕ ಕ್ರಮ ಸರಿಯಾಗಿಲ್ಲ ಎಂದು ಕವಿವಿ ಹಿರಿಯ ಪ್ರಾಧ್ಯಾಪಕ ಡಾ| ಮಹಾದೇವಪ್ಪ ಕರಿದುರಗನವರ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ರಿಟ್ ಅರ್ಜಿಯನ್ನು ಪುರಸ್ಕರಿಸಿರುವ ಹೈಕೋರ್ಟ್ ಪೀಠವು ಈ ವಿಚಾರವಾಗಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಂತೆ ಸೋಮವಾರ ಮಧ್ಯಂತರ ಆದೇಶ ನೀಡಿ ವಿಚಾರಣೆಯನ್ನು ಜು.23ಕ್ಕೆ ಮುಂದೂಡಿದೆ.
ಕವಿವಿ ಕುಲಪತಿ ಹುದ್ದೆ 10 ತಿಂಗಳಿಂದ ಭರ್ತಿಯಾಗಿರಲಿಲ್ಲ. 2 ದಿನದ ಹಿಂದಷ್ಟೇ ಮಂಗಳೂರು ವಿವಿ ಹಿರಿಯ ಪ್ರಾಧ್ಯಾಪಕ ಡಾ| ಎ.ಎಂ.ಖಾನ್ ಅವರನ್ನು ಕಾಯಂ ಕುಲಪತಿಯಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಅದರಂತೆ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರಾದರೂ ಈಗ ಕಾನೂನು ತೊಡಕು ಎದುರಾಗಿದೆ. ರಿಟ್ ಅರ್ಜಿ ಸಲ್ಲಿಸಿರುವ ಪ್ರಾಧ್ಯಾಪಕ ಡಾ.ಮಹಾದೇವಪ್ಪ ಕರಿದುರಗನವರ ಅವರೂ ಕುಲಪತಿ ಹುದ್ದೆ ಆಕಾಂಕ್ಷಿ ಆಗಿದ್ದಾರೆ.