ಬೆಂಗಳೂರು: ರಾಜ್ಯದಲ್ಲಿ ನಕಲಿ ವಕೀಲರ ಹಾವಳಿ ಹೆಚ್ಚಾಗಿದ್ದು, ಈಗಾಗಲೇ ಐವರು ನಕಲಿ ವಕೀಲರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಎಸ್ ಎಸ್ ಮಿಟ್ಟಲಕೋಡ ತಿಳಿಸಿದ್ದಾರೆ.
ಬೆಂಗಳೂರಿನ ರಾಜ್ಯ ವಕೀಲರ ಪರಿಷತ್ತಿನ ಕಚೇರಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಕಲಿ ವಕೀಲರು ಹಾವಳಿ ಜಾಸ್ತಿಯಾಗಿದೆ. ಅನೇಕರು ಹೊರ ರಾಜ್ಯಗಳಲ್ಲಿ ಕಾನೂನು ಪದವಿಯನ್ನು ಪಡೆಯಲಾಗಿದೆ ಎಂದು ತಿಳಿಸಿ ನಕಲಿ ಅಂಕಪಟ್ಟಿ ಸಲ್ಲಿಸಿ, ವಕೀಲಿಕೆ ನಡೆಸಲು ಲೈಸೆನ್ಸ್ ಕೋರಿ ಅರ್ಜಿ ಸಲ್ಲಿಸಿದ್ದರು. ಅಂತಹ ಅಂಕಪಟ್ಟಿಗಳನ್ನು ಪರಿಶೀಲನೆಗಾಗಿ ಸಂಬಂಧಪಟ್ಟ ವಿಶ್ವವಿದ್ಯಾಲಯಗಳಿಗೆ ಕಳುಹಿಸಲಾಗಿತ್ತು. ಪರಿಶೀಲನೆ ವೇಳೆ ಕೆಲವರು ಸಲ್ಲಿಸಿದ್ದ ಅಂಕಪಟ್ಟಿಗಳು ನಕಲಿ ಎಂಬುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ, ನಕಲಿ ವಕೀಲರ ವಿರುದ್ಧ ಬೆಂಗಳೂರಿನ ವಿಧಾನಸೌಧ ಸೌಧ, ಕಬ್ಬನ್ ಪಾರ್ಕ್, ಮತ್ತು ಬಸವೇಶ್ವರ ನಗರ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಮತ್ತು ತುಮಕೂರು ಜಿಲ್ಲೆಯಲ್ಲಿ ಎರಡು ಎಫ್ಐಆರ್ ದಾಖಲಾಗಿವೆ. ಸುಳ್ಳು ಮಾಹಿತಿ ನೀಡಿ ಲೈಸೆನ್ಸ್ ಪಡೆದವರ ಬಗ್ಗೆ ಪರಿಷತ್ ವತಿಯಿಂದ ದೂರು ದಾಖಲಿಸಲಾಗುತ್ತಿದೆ. ಆದ್ದರಿಂದ ಸುಳ್ಳು ಮಾಹಿತಿ ಹಾಗೂ ದಾಖಲೆ ನೀಡಿ ಲೈಸೆನ್ಸ್ ಪಡೆದವರು ಆಗಸ್ಟ್ 30ರೊಳಗೆ ಸ್ವಯಂ ಪ್ರೇರಿತವಾಗಿ ಅವುಗಳನ್ನು ಹಿಂದಿರುಗಿಸಬೇಕು ಎಂದು ಮಿಟ್ಟಲಕೋಡ ಸೂಚಿಸಿದ್ದಾರೆ.